ರಾಜ್ಯದಲ್ಲೂ, ಪುತ್ತೂರಿನಲ್ಲೂ ಕಾಂಗ್ರೆಸ್ ಗೆಲ್ಲಿಸಲು ಈಗಲೇ ಸಿದ್ಧರಾಗಬೇಕು- ಕಾರ್ಯಕರ್ತರಿಗೆ ಶಕುಂತಳಾ ಶೆಟ್ಟಿ ಕರೆ
ಪುತ್ತೂರು: ತಳಮಟ್ಟದಲ್ಲೇ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ಮೂಲಕ ರಾಜ್ಯದಲ್ಲಿ, ಹಾಗೂ ಪುತ್ತೂರಿನಲ್ಲಿ ಪಕ್ಷ ಗೆದ್ದು ಬರುವಂತೆ ಮಾಡಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅ.೩೦ರಂದು ಕಲ್ಪಣೆ ಸಮುದಾಯ ಭವನದಲ್ಲಿ ನಡೆದ ಸರ್ವೆ ವಲಯ ಕಾಂಗ್ರೆಸ್ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ತಳಮಟ್ಟದಲ್ಲೇ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಬಿಜೆಪಿಯ ದುರಾಡಳಿತವನ್ನು ಜನತೆಗೆ ತಿಳಿಸುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಗೆಲ್ಲುವ ಪ್ರಯತ್ನವನ್ನು ನಾವೆಲ್ಲಾ ಮಾಡಬೇಕು. ಅದಕ್ಕಾಗಿ ಈಗಿಂದೀಗಲೇ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಕುಂತಳಾ ಶೆಟ್ಟಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಬಿ.ವಿಶ್ವನಾಥ ರೈ ಮಾತನಾಡಿ ಪುತ್ತೂರಿನಲ್ಲಿ ನಮ್ಮ ಪಕ್ಷದ ಶಾಸಕರನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದರು. ವಲಯಾಧ್ಯಕ್ಷ ಎಸ್.ಡಿ ವಸಂತ ಅವರ ಅಧ್ಯಕ್ಷತೆ ವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಾಮಚಂದ್ರ ಸೊರಕೆ ಪ್ರಸ್ತಾವನೆಗೈದರು. ಕೆಪಿಸಿಸಿ ವಕ್ತಾರರಾದ ಅಮಳ ರಾಮಚಂದ್ರ ಭಟ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಎಸ್.ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ವಲಯ ಉಸ್ತುವಾರಿ ಯಾಕೂಬ್ ಮುಲಾರ್ ಬೂತ್ ಅಧ್ಯಕ್ಷರಾದ ಯತೀಶ್ ರೈ, ಮಜೀದ್ ಬಾಳಾಯ, ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಮರಿಯ, ಮುಂಡೂರು ಗ್ರಾ.ಪಂ ಸದಸ್ಯರಾದ ಕಮಲೇಶ್ ಎಸ್.ವಿ, ವಿಜಯ ಕರ್ಮಿನಡ್ಕ, ಕಮಲ ನೇರೋಳ್ತಡ್ಕ, ಮಾಜಿ ತಾ.ಪಂ ಸದಸ್ಯೆ ಸುಮತಿ ಹಾಗೂ ಕಾಂಗ್ರೆಸ್ ಸ್ಥಳೀಯ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ವಲಯ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿದರು. ಮಜೀದ್ ಬಾಳಾಯ ವಂದಿಸಿದರು.