ಮಂಗಳೂರು: ಚಿನ್ನಾಭರಣ ಕಳ್ಳತನ ನಡೆಸಿದ ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ ಪೊಲೀಸರು
ಮಂಗಳೂರು:ಉಲ್ಲಾಸ್ ನಗರದ ಮನೆಯೊಂದರಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೇರಾಜೆಯ ಅಶೋಕ್(41) ಬಂಧಿತ ಆರೋಪಿ.

ಕದ್ದ ಸೊತ್ತುಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಾರ್ಚ್ 7 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾವೂರಿನ ಉಲ್ಲಾಸ್ ನಗರದಲ್ಲಿರುವ ಮನೆಯಲ್ಲಿ ಕಳ್ಳತನ ನಡೆದಿತ್ತು. ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ದುಷ್ಕರ್ಮಿಗಳು ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿದ್ದರು.
ನಂತರ ಕಾವೂರು ಪೊಲೀಸರಿಗೆ ದೂರು ನೀಡಲಾಗಿದ್ದು, 39 ಗ್ರಾಂ ಚಿನ್ನಾಭರಣ ಮತ್ತು 182 ಗ್ರಾಂ ಬೆಳ್ಳಿ ಆಭರಣಗಳು ಒಟ್ಟು 4,80,000 ರೂ. ಮೌಲ್ಯದ್ದಾಗಿದ್ದು, ಕಳ್ಳತನವಾಗಿದೆ ಎಂದು ತಿಳಿಸಲಾಗಿದೆ.





