ಜು.14: ಪುತ್ತೂರಿನಲ್ಲಿ ಬಿಜೆಪಿ ಪ್ರತಿಭಟನೆ
ಪುತ್ತೂರು: ರಾಜ್ಯ ಕಾಂಗ್ರೆಸ್ ಸರಕಾರ ಅಭಿವೃದ್ಧಿಯಲ್ಲಿ ಜನ ವಿರೋಧಿ ನೀತಿ ಅನುಸರಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮರಳು, ಕೆಂಪು ಕಲ್ಲು ಅಭಾವವಿದೆ. ಇದರಿಂದಾಗಿ ಕಾರ್ಮಿಕ ವರ್ಗ ಸಂಕಷ್ಟ ಅನುಭವಿಸುತ್ತಿದೆ. ಈ ವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಜು.14 ರಂದು ಪತ್ತೂರು ಬಿಜೆಪಿಯಿಂದ ಕಿಲ್ಲೆ ಮೈದಾನದ ಆವರಣದ ಅಮರ್ ಜವಾನ್ ಸ್ಮಾರಕದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ತಿಳಿಸಿದ್ದಾರೆ.
ಜು.11ರಂದು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2 ವರ್ಷಗಳಿಂದ ಬಡವರಿಗೆ ವಸತಿ ಯೋಜನೆಯಲ್ಲಿ ನಿವೇಶನ ಹಾಗೂ ಮನೆ ಮಂಜೂರಾತಿ ಆಗದ ಬಡ ವರ್ಗ ಸರಕಾರದ ಯೋಜನೆಯಿಂದ ವಂಚಿತರಾಗಿದ್ದಾರೆ. ಅದೇ ರೀತಿ 9/11 ಸಮಸ್ಯೆ, ರೇಷನ್ ಕಾರ್ಡ್ ಸಮಸ್ಯೆಯಾಗಿ ಎಲ್ಲಾ ರೀತಿಯಲ್ಲೂ ಜನರಿಗೆ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ ಬಿ, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಶೆಟ್ಟಿ, ಅನಿಲ್ ತೆಂಕಿಲ, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ ಉಪಸ್ಥಿತರಿದ್ದರು.
