ಕರಾವಳಿ

ಕೆಯ್ಯೂರು: ಅಮ್ಮನ ಪ್ರಾಣ ಕಾಪಾಡಲು ನಾಗರಹಾವಿನ ವಿಷ ಹೀರಿದ ಮಗಳು…!
ಧೈರ್ಯವಂತ ಮಗಳ ಸಾಹಸ, ಸಮಯಪ್ರಜ್ಞೆಗೆ ಭಾರೀ ಪ್ರಶಂಸೆ

ಪುತ್ತೂರು: ಧೈರ್ಯವಂತ ಹೆಣ್ಮಗಳೊಬ್ಬಳು ಹಾವಿನ ವಿಷವನ್ನು ಬಾಯಿಯಿಂದ ಹೀರಿ ತನ್ನ ತಾಯಿಯ ಪ್ರಾಣ ರಕ್ಷಣೆ ಮಾಡಿರುವ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದಿಂದ ವರದಿಯಾಗಿದೆ.





ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯೆ ಮಮತಾ ರೈಯವರಿಗೆ ನಾಗರ ಹಾವು ಕಡಿತಕ್ಕೊಳಗಾದವರಾಗಿದ್ದು ಅವರ ಪುತ್ರಿ ಶ್ರಮ್ಯ ರೈ ಜೀವ ಪಣಕ್ಕಿಟ್ಟು ತಾಯಿಯನ್ನು ರಕ್ಷಿಸಿದ ಧೈರ್ಯವಂತೆ.





ಕೆಯ್ಯೂರು ಸತೀಶ್ ರೈಯವರ ಪತ್ನಿ ಮಮತಾ ರೈಯವರು ತನ್ನ ಮನೆಯಿಂದ ಅಲ್ಪ ದೂರದಲ್ಲಿರುವ ತನ್ನ ಮಾವನ ತೋಟಕ್ಕೆ ನೀರು ಬಿಡಲೆಂದು ಸಂಜೆ ವೇಳೆ ವಿದ್ಯುತ್ ಪಂಪು ಸ್ವಿಚ್ ಹಾಕಲು ತೆರಳಿದ್ದರು. ಆ ಸಂದರ್ಭದಲ್ಲಿ ಮಮತಾ ರೈ ಅವರ ಕಾಳಿಗೆ ಹಾವು ಕಚ್ಚಿದೆ. ಹಾವಿನ ಒಂದು ಹಲ್ಲು ಇವರ ಕಾಲಿಗೆ ಬಲವಾಗಿ ತಾಗಿ ರಕ್ತ ಬರಲು ಆರಂಭಿಸಿದೆ.bಮಮತಾ ರೈ ಅವರು ತಕ್ಷಣವೇ ಮನೆಗೆ ಮತ್ತು ಸ್ಥಳೀಯರಿಗೆ ವಿಚಾರ ತಿಳಿಸಿದ್ದಾರೆ.



ಮನೆಯಲ್ಲಿದ್ದ ಕೆಲಸದವರು ಮಮತಾ ರೈಯವರ ಕಾಲಿಗೆ ಬೈಹುಲ್ಲಿನಿಂದ ವಿಷ ಮೇಲಕ್ಕೆ ಹೋಗದ ರೀತಿಯಲ್ಲಿ ಕಟ್ಟಿದ್ದಾರೆ. ಈ ವೇಳೆ ಸ್ಥಳಕ್ಕೆ ಓಡಿ ಬಂದ ಮಗಳು ಶ್ರಮ್ಯ ರೈ ಅವರು ಅತ್ತಿತ್ತ ನೋಡದೆ ಒಂದೇ ಸಮನೆ ಹಾವು ಕಚ್ಚಿದ ಭಾಗಕ್ಕೆ ಬಾಯಿ ಇಟ್ಟು ರಕ್ತವನ್ನು ಹೀರಿ ತೆಗೆಯುತ್ತಾರೆ. ನಂತರ ಮಮತಾ ರೈ ಅವರನ್ನು ಪುತ್ತೂರು ಖಾಸಗೀ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತದೆ.





ಚಿಕಿತ್ಸೆ ಮಾಡಿದ ವೈದ್ಯರು ನೀವು ನಿಮ್ಮ ಮಗಳು ಮಾಡಿದ ತುರ್ತು ಚಿಕಿತ್ಸೆಯಿಂದ ಅಪಾಯದಿಂದ ಪಾರಾಗಿದ್ದೀರಿ ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳುತ್ತಾರೆ. ಮೂರು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮಮತಾ ರೈಯವರು ಮನೆಗೆ ಮರಳಿದ್ದಾರೆ.





ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಬಿಎಸ್‌ಎ ವ್ಯಾಸಂಗ ಮಾಡುತ್ತಿರುವ ಶ್ರಮ್ಯ ರೈಯವರು ತನ್ನ ತಾಯಿಯ ಪ್ರಾಣ ಉಳಿಸಿದ ಧೈರ್ಯಶಾಲಿ ಹೆಣ್ಮಗಳಾಗಿದ್ದು ಇದೀಗ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.




ನಾನು ಸಿನಿಮಾಗಳಲ್ಲಿ ಇಂತಹ ದೃಶ್ಯವನ್ನು ನೋಡಿದ್ದೇನೆ. ತಾಯಿಗೆ ಹಾವು ಕಚ್ಚಿದೆ ಎಂದು ಗೊತ್ತಾದ ತಕ್ಷಣ ನನಗೆ ಬಾಯಿಯಿಂದ ರಕ್ತವನ್ನು ಹೀರಿ ತೆಗೆಯಬೇಕು ಎಂದು ನೆನಪಾಯಿತು. ಅದರಂತೆ ವಿಷವನ್ನು ಹೀರಿ ತೆಗೆದಿದ್ದೇನೆ. ಆ ಸಂದರ್ಭದಲ್ಲಿ ನನಗೆ ನನ್ನ ಜೀವಕ್ಕಿಂತಲೂ ತಾಯಿಯ ಜೀವವೇ ಮುಖ್ಯವಾಗಿತ್ತು ಎಂದು ಶ್ರಮ್ಯ ರೈ ತಿಳಿಸಿದ್ದಾರೆ.



ಸಿನಿಮಾದಿಂದ ಸಿಕ್ಕಿದ ಪಾಠದಿಂದ ತನ್ನ ತಾಯಿಯ ಪ್ರಾಣ ಉಳಿಸಿದ ಶ್ರಮ್ಯ ರೈ ಅವರ ಸಾಹಸ ಮತ್ತು ಸಮಯ ಪ್ರಜ್ಞೆಗೆ ಇದೀಗ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!