ಪಾಟ್ರಕೋಡಿ ನಿವಾಸಿಗಳ ಕುರಿತು ಅವಹೇಳನಕಾರಿ ಭಾಷಣ ಆರೋಪ: ನರಸಿಂಹ ಮಾಣಿ ಹಾಗೂ ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಾಟ್ರಕೋಡಿ ನಿವಾಸಿಗಳಿಂದ ವಿಟ್ಲ ಠಾಣೆಗೆ ದೂರು
ವಿಟ್ಲ: ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆದ ಕಾರ್ಯಕ್ರಮವೊಂದರಲ್ಲಿ ನರಸಿಂಹ ಮಾಣಿರವರು ಒಂದು ಸಮುದಾಯದ ವಿರುದ್ಧ ಪ್ರಚೋದನಕಾರಿಯಾಗಿ ಭಾಷಣ ಮಾಡಿ ಶಾಂತಿ, ಸೌಹಾರ್ದತೆಗೆ ಧಕ್ಕೆ ತಂದಿದ್ದು ಅವರ ವಿರುದ್ಧ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಾಟ್ರಕೋಡಿ ನಿವಾಸಿಗಳು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನರಸಿಂಹ ಮಾಣಿರವರು ತಮ್ಮ ಭಾಷಣದಲ್ಲಿ ಪಾಟ್ರಕೋಡಿರವರು ದೇಶದ್ರೊಹಿಗಳು, ದನ ಕಳ್ಳರು ಪಾಟ್ರಕೋಡಿಯು ಮಿನಿ ಪಾಕಿಸ್ತಾನ ಎಂಬ ಆರೋಪವನ್ನು ಮಾಡಿ ಶಾಂತಿ ಸೌಹಾರ್ದತೆ ಹಾಗೂ ಸಹಬಾಳ್ವೆ ನಡೆಸುವ ಪಾಟ್ರಕೋಡಿ ನಿವಾಸಿಗಳನ್ನು ಧರ್ಮದ ಆಧಾರದಲ್ಲಿ ಪರಸ್ಪರ ಎತ್ತಿ ಕಟ್ಟಿ ಹಿಂದೂ ಮುಸ್ಲಿಮರ ಮಧ್ಯೆ ಗಲಾಟೆ ಎಬ್ಬಿಸಲು ವಿಫಲ ಪ್ರಯತ್ನ ನಡೆಸಿದ್ದಾರೆ.
ಹಾಗಾಗಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಪಾಟ್ರಕೋಡಿ ನಿವಾಸಿಗಳು ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.