ಮಾ.11: ಪುತ್ತೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಸಮಾವೇಶ-25 ಸಾವಿರ ಜನರು ಸೇರುವ ನಿರೀಕ್ಷೆ- ಶಾಸಕ ಮಠಂದೂರು
ಪುತ್ತೂರು: ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೂ ಪೂರ್ವಾಂಚಲ ಮಾದರಿಯಲ್ಲಿಯೆ ಪಕ್ಷವು ಗೆಲವು ಪಡೆಯಲಿದ್ದು ಪಕ್ಷದ ಸೂಚನೆಯಂತೆ ಕಳೆದ 6 ತಿಂಗಳಿನಿಂದ ಹಲವಾರು ಚುನಾವಣಾ ಸಿದ್ದತೆಗಳನ್ನು ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಾ.11ರಂದು ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿ ನಡೆಯುವ ವಿಜಯ ಸಂಕಲ್ಪ ಸಮಾವೇಶದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ 25 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಜಯ ಸಂಕಲ್ಪ ಯಾತ್ರೆಗೆ ಪೆರ್ನಾಜೆಯಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಕೊಳ್ತಿಗೆ, ನೆಟ್ಟಣಿಗೆ ಮುಡ್ನೂರು, ಮಾಡ್ನೂರು ಕಾರ್ಯಕರ್ತರು ವಿಜಯ ಸಂಕಲ್ಪ ಯಾತ್ರೆಯನ್ನು ಪೆರ್ನಾಜೆಯಲ್ಲಿ ಸ್ವಾಗತಿಸಲಿದ್ದಾರೆ. ಬಳಿಕ ಸಂಜೆ ಗಂಟೆ 4.30ಕ್ಕೆ ಸಮಾವೇಶ ನಡೆಯಲಿದೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪರವರ ನೇತೃತ್ವದಲ್ಲಿ ಸಚಿವರಾದ ಸುನಿಲ್, ಅಂಗಾರ, ಆರ್ ಅಶೋಕ್, ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಅನೇಕ ಮಂತ್ರಿಗಳೊಂದಿಗೆ ಮಲೆಮಾದೇಶ್ವರ ಬೆಟ್ಟದಿಂದ ಹೊರಟ ಯಾತ್ರೆ ಮಾ.11ರಂದು ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ಮಾಡಲಿದೆ. ಯಾತ್ರೆಯು ಮಡಿಕೇರಿಯಿಂದ ಸುಳ್ಯಕ್ಕೆ ಬಂದು ಅಲ್ಲಿ ರೋಡ್ ಶೋ ಆದ ಬಳಿಕ ಸಂಜೆ ಪುತ್ತೂರಿಗೆ ಬಂದು ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ಸಿದ್ದತೆ ಪಕ್ಷದಿಂದ ನಡೆಯುತ್ತಿದೆ. ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಸಮಿತಿಯಿಂದ ರಾಜ್ಯದ ಚುನಾವಣೆಯ ಸಹಪ್ರಭಾರಿಯಾಗಿರುವ ಅಣ್ಣಾ ಮಲೈ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಪುತ್ತೂರಿನ ಬಿಜೆಪಿ ಪ್ರಭಾರಿಯೂ ಆಗಿರುವ ರಾಮದಾಸ್ ಬಂಟ್ವಾಳ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಕೃಷ್ಣ ರೈ, ವಿಭಾಗದ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ವಿಧಾನಸಭಾ ಕ್ಷೇತ್ರದ ಪ್ರಭಾರಿ ರಾಜೇಶ್ ಕಾವೇರಿ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.





