ಕರಾವಳಿಕ್ರೈಂ

ಸುಳ್ಯ: ರಾತ್ರಿ ವೇಳೆ ಮನೆಯೊಡತಿಯ ಕೊಲೆಗೆ ಯತ್ನ- ಇಬ್ಬರು ಆರೋಪಿಗಳ ಬಂಧನ



ಸುಳ್ಯ: ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಮನೆಯೊಡತಿಯನ್ನೇ ಕೊಲೆಗೆ ಯತ್ನಿಸಿದ್ದು ಇದೀಗ ಪೋಲೀಸರ ಅತಿಥಿಯಾಗಿದ್ದಾರೆ.

ಚಿನ್ನ, ನಗದು ದರೋಡೆಗೆ ಯತ್ನಿಸಿರುವ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ ನಡೆದಿದೆ.



ವರದರಾಜ್ ಮತ್ತು ಸೈಜಾನ್ ಕೃತ್ಯ ಎಸಗಿದ ಆರೋಪಿಗಳು. ವರದರಾಜ್ ಹಾಗೂ ಸೈಜಾನ್ ಎಂಬವರು ಕೆಲ ತಿಂಗಳುಗಳಿಂದ ಕರಿಕ್ಕಳ ಗುರುಕೃಪ ವಿಶ್ವನಾಥ್ ಅವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು, ಸಮೀಪದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು.

ಮಾ.2ರಂದು ರಾತ್ರಿ ಸುಮಾರು 9.30ರ ವೇಳೆಗೆ ಆರೋಪಿಗಳು ಮನೆಯ ಮಹಡಿಯನ್ನು ಏಣಿಯ ಮೂಲಕ ಹತ್ತಿ ಮಹಡಿಯಲ್ಲಿದ್ದ ಮನೆ ಮಾಲಕ ವಿಶ್ವನಾಥ್ ಅವರ ಪತ್ನಿ ಗಾಯತ್ರಿ ಅವರ ಕುತ್ತಿಗೆಯನ್ನು ಒತ್ತಿ ಹಿಡಿದು ಚಿನ್ನ ಮತ್ತು ಹಣ ಎಲ್ಲಿದೆ ಎಂದು ಕೇಳಿದ್ದು, ಮನೆಯೊಡತಿ ಇಲ್ಲ ಎಂದಾಗ ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದಾರೆ. ಓರ್ವ ಆರೋಪಿ ಗಾಯತ್ರಿ ಅವರ ಎರಡೂ ಕಾಲುಗಳನ್ನೂ ಹಿಡಿದುಕೊಂಡಿದ್ದಾನೆ. ಈ ವೇಳೆ ಗಾಯತ್ರಿ ಅವರ ಬೊಬ್ಬೆ ಕೇಳಿ ಮನೆ ಸಮೀಪದ ಮನೆಯವರು ಅಲ್ಲಿಗೆ ಬಂದಿದ್ದಾರೆ.

ಆರೋಪಿ ವರದರಾಜ್ ಹರಿತವಾದ ಆಯುಧದಿಂದ ಗಾಯತ್ರಿ ಅವರ ಕುತ್ತಿಗೆಗೆ ಎರಡು ಕಡೆ ಇರಿದ ಪರಿಣಾಮ ಗಾಯವಾಗಿದೆ. ಅವರಿಗೆ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!