ಕುಡಿದು ಟೆಂಪೋ ಚಲಾಯಿಸಿದ ಚಾಲಕನ ರಾದ್ದಾಂತ: ಬೈಕ್ ಗೆ ಹಾನಿ; ಓಡಿ ಹೋಗಿ ಪ್ರಾಣ ಉಳಿಸಿಕೊಂಡ ಸಾರ್ವಜನಿಕರು
ಉಡುಪಿ: ಕುಡಿದು ವಾಹನ ಚಲಾಯಿಸಿದ ಟೆಂಪೋ ಚಾಲಕ ಎರಡು ದ್ವಿಚಕ್ರ ವಾಹನಗಳನ್ನು ತನ್ನ ವಾಹನದ ಅಡಿಗೆ ಹಾಕಿ ಬೀದಿ ರಂಪಾಟ ನಡೆಸಿದ ಘಟನೆ ಜ.26ರಂದು ರಾತ್ರಿ ಬೀಡಿನಗುಡ್ಡೆಯಲ್ಲಿ ನಡೆದಿದೆ.

ಟೆಂಪೋ ಚಲಾಯಿಸುತ್ತಿದ್ದ ದಿನೇಶ ಎಂಬಾತ ತನ್ನ ಟೆಂಪೋದಲ್ಲಿ ಬೀಡಿನಗುಡ್ಡೆಯಿಂದ ಡಯಾನ ಕಡೆ ತೆರಳುತ್ತಿದ್ದಾಗ ಸರ್ಕಲ್ ಬಳಿ ಬೈಕ್ ಗೆ ಢಿಕ್ಕಿ ಹೊಡೆಯುವ ರೀತಿಯಲ್ಲಿ ಅಜಾಗರುಕತೆಯಿಂದ ವಾಹನ ಚಲಾಯಿಸಿದ್ದು ಇದನ್ನು ಪ್ರಶ್ನಿಸಿದ ಬೈಕ್ ಚಾಲಕನಿಗೆ ಗುರಾಯಿಸಿದ್ದ ಎನ್ನಲಾಗಿದೆ.
ಇದಕ್ಕೆ ಕೋಪಗೊಂಡ ಬೈಕ್ ಸವಾರ ಟೆಂಪೋ ಚಾಲಕನ ಕಪಾಳಕ್ಕೆ ಹೊಡೆದಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಟೆಂಪೋ ಚಾಲಕ ದಿನೇಶ ತನ್ನ ಟೆಂಪೋವನ್ನು ವೇಗವಾಗಿ ಬೈಕ್ ಮೇಲೆ ಹತ್ತಿಸಿದ್ದ. ತಕ್ಷಣವೇ ಬೈಕ್ ಸವಾರ ಮತ್ತು ಸಹಸವಾರ ಬೈಕ್ ಬಿಟ್ಟು ಹಾರಿ ಪ್ರಾಣ ರಕ್ಷಣೆ ಮಾಡಿಕೊಂಡಿದ್ದರು.
ನಂತರ ಚಾಲಕ ಟೆಂಪೋವನ್ನು ವೇಗವಾಗಿ ಹಿಂದಕ್ಕೆ ಚಲಾಯಿಸಿದ್ದು ಈ ವೇಳೆ ಹಿಂದೆ ಇನ್ನೊಂದು ಬೈಕ್ ಗೆ ಟೆಂಪೋ ಗುದ್ದಿ ಹಾನಿಯಾಗಿದೆ.
ಕುಡಿದ ಮತ್ತಿನಲ್ಲಿದ್ದ ಟೆಂಪೋ ಚಾಲಕ ಟೆಂಪೋವನ್ನು ಹಿಂದಕ್ಕೆ ಚಲಾಯಿಸುವಾಗ ಅಲ್ಲೇ ನಿಂತಿದ್ದ ಮಹಿಳೆ ಸಹಿತ ಅನೇಕ ಮಂದಿ ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ನಗರ ಠಾಣಾ ಪೊಲೀಸರು ಭೇಟಿ ನೀಡಿ ಟೆಂಪೋ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.