ಸುಳ್ಯ: ಒಡಬಾಯಿ ತೂಗು ಸೇತುವೆಗೆ ಆಮ್ ಅದ್ಮಿ ಪಕ್ಷದ ಮುಖಂಡರ ಭೇಟಿ, ಪರಿಶೀಲನೆ
ಸುಳ್ಯ ಒಡಬಾಯಿ ತೂಗು ಸೇತುವೆಯ ತಡೆಬೇಲಿ ಮುರಿದು ಹೋಗಿದ್ದು, ಈ ಭಾಗದಲ್ಲಿ ನಡೆದಾಡುವ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಇದರಿಂದ ಬರುವ ಅಪಾಯದ ಬಗ್ಗೆ ‘ನ್ಯೂಸ್ ಬೈಟ್’ ವೆಬ್ಸೈಟ್ ನಲ್ಲಿ ವರದಿ ಮಾಡಲಾಗಿತ್ತು. ಈ ವರದಿಗೆ ಸ್ಪಂದಿಸಿರುವ ಸುಳ್ಯದ ಎ ಎ ಪಿ ಪಕ್ಷದ ಮುಖಂಡರುಗಳು ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಸೇತುವೆ ಮೇಲೆ ನಡೆದಾಡುವ ಸಾರ್ವಜನಿಕರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಬಳಿಕ ಪ್ರತಿಕ್ರಿಯಿಸಿರುವ ಅವರು ಈ ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಅವರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿ ಕೊಡುವ ಉದ್ದೇಶದಿಂದ ಸುಳ್ಯದ ರೋಟರಿ ಸಂಸ್ಥೆ, ಸಾರ್ವಜನಿಕರ ಸಹಕಾರದಿಂದ ಅಂದು ಈ ಸೇತುವೆಯನ್ನು ನಿರ್ಮಿಸಲಾಗಿತ್ತು.
ನಂತರ ಅಜ್ಜಾವರ ಗ್ರಾಮ ಪಂಚಾಯತಿಯಿಂದ ಇದರ ನಿರ್ವಹಣೆಗಾಗಿ ಸುಳ್ಯ ನಗರ ಪಂಚಾಯತಿಗೆ ನೀಡಲಾಗಿತ್ತು.
ಆದರೆ ಜನರ ಹಿತಕ್ಕಾಗಿ ಸಂಘ ಸಂಸ್ಥೆಗಳು ಶ್ರಮವಹಿಸಿ ನಿರ್ಮಿಸಿ ಕೊಟ್ಟಿರುವ ಈ ಒಂದು ಅತ್ಯಮೂಲ್ಯವಾದ ನಿಧಿಯನ್ನು ಸಂರಕ್ಷಿಸಿಕೊಳ್ಳುವ ಕೆಲಸವನ್ನು ಸಂಬಂಧ ಪಟ್ಟ ಇಲಾಖೆಗಳು, ಅಥವಾ ಜನಪ್ರತಿನಿಧಿಗಳು ಮಾಡುತ್ತಿಲ್ಲ. ಇವರ ನಿರ್ಲಕ್ಷ ಧೋರಣೆಯಿಂದ ನೂರಾರು ಗ್ರಾಮಸ್ಥರ ಆಶ್ರಯದಾಯಕವಾಗಿರುವ ಸೇತುವೆ ಅಳಿವಿನಂಚಿಕೆಗೆ ಹೋಗುತ್ತಿದೆ.
ಇದಕ್ಕೆ ಜವಾಬ್ದಾರರು ಯಾರು? ಆದ್ದರಿಂದ ಗ್ರಾಮ ಪಂಚಾಯಿತಿಯಾಗಲಿ ಅಥವಾ ನಗರ ಪಂಚಾಯಿತಿಯವರೇ ಆಗಿರಲಿ ಆದಷ್ಟು ಶೀಘ್ರದಲ್ಲಿ ಈ ಸೇತುವೆಯ ಕಡೆ ಗಮನಹರಿಸಿ ಮುರಿದು ಹೋಗಿರುವಂತಹ ತಡೆ ಬೇಲಿಯನ್ನು ದುರಸ್ತಿ ಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎ ಎ ಪಿ ಪಕ್ಷದ ಸುಳ್ಯ ವಿಧಾನಸಭಾ ಆಕಾಂಕ್ಷಿ ಸುಮನ ಬೆಳ್ಳಾಳ್ಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಶೀದ್ ಜಟ್ಟಿಪಳ್ಳ, ಕಲಂದರ್ ಎಲಿ ಮಲೆ,ಪಕ್ಷದ ಗ್ರಾಮ ಸಂಪರ್ಕ ಅಭಿಯಾನದ ಮುಖ್ಯಸ್ಥ ಗಣೇಶ್ ಪ್ರಸಾದ್, ಮುಖಂಡರಾದ ಕಲಂದರ್ ಶಾಫಿ ಅಡ್ಕ ಮೊದಲಾದವರು ಉಪಸ್ಥಿತರಿದ್ದರು.





