ಖ್ಯಾತ ಪ್ರೇರಣಾದಾಯಕ ಭಾಷಣಗಾರ ರಫೀಕ್ ಮಾಸ್ಟರ್ ಕರ್ನಾಟಕ ಪ್ರೆಸ್ ಕ್ಲಬ್ನ ‘ಗುರು ಚೈತನ್ಯ’ ಪ್ರಶಸ್ತಿಗೆ ಆಯ್ಕೆ
ಪುತ್ತೂರು: ಶಿಕ್ಷಣ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸುದೀರ್ಘ ಸಮಯಗಳಿಂದ ಸೇವೆ ಸಲ್ಲಿಸುತ್ತಿರುವ ರಫೀಕ್ ಮಾಸ್ಟರ್ ಅವರು 2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ಪ್ರೆಸ್ ಕ್ಲಬ್ನ “ಗುರು ಚೈತನ್ಯ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ಪ್ರೆಸ್ ಕ್ಲಬ್ ಪ್ರತೀ ವರ್ಷ ಆಯೋಜಿಸುವ ‘ಗುರು ನಮನ’ ಕಾರ್ಯಕ್ರಮದ ಅಂಗವಾಗಿ ನಾಡಿನ ಶ್ರೇಷ್ಠ ಶಿಕ್ಷಕರು ಮತ್ತು ಸಮಾಜ ಸೇವಕರನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ. ಸೆ.24ರಂದು ಬೆಂಗಳೂರಿನ ಕಲಾ ಗ್ರಾಮದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಹಾಗೂ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಮತ್ತು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸ್ಮರಣಾರ್ಥ ಆಯೋಜಿಸಲಾದ ‘ಗುರು ನಮನ’ ವೇದಿಕೆಯಲ್ಲಿ ರಫೀಕ್ ಮಾಸ್ಟರ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುತ್ತದೆ.
ಮೂಲತಃ ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ನಿವಾಸಿಯಾಗಿದ್ದು ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ರಫೀಕ್ ಮಾಸ್ಟರ್ ಅವರು ಪ್ರೇರಣಾದಾಯಕ ಭಾಷಣಗಾರರು, ತರಬೇತುದಾರರೂ ಆಗಿದ್ದು ಸಾವಿರಾರು ವಿದ್ಯಾರ್ಥಿಗಳ ಪಾಲಿನ ಬೆಳಕಾಗಿದ್ದಾರೆ. ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ಸಂಸ್ಥೆಯ ಕೌನ್ಸಿಲರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


