ಪಣಂಬೂರು: ಸುಲಿಗೆ ಪ್ರಕರಣ, ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಂಗಳೂರು: ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಮಡಿಕೇರಿ ಜಿಲ್ಲೆಯ ಸೋಮವಾರ ಪೇಟೆಯ
ಮೂವರು ಸ್ನೇಹಿತರು ತಣ್ಣೀರುಬಾವಿ ಬೀಚ್ ಗೆ ಬಂದಿದ್ದರು. ದಾರಿ ತಪ್ಪಿದ ಕಾರಣ ರಸ್ತೆ ಬದಿಯಿದ್ದ ವ್ಯಕ್ತಿಯೊಬ್ಬರೊಂದಿಗೆ ವಿಳಾಸ ಕೇಳಲು ವಾಹನ ನಿಲ್ಲಿಸಿದಾಗ ಆರೋಪಿಗಳಾದ ಕಸಬಾ ಬೆಂಗ್ರೆ ನಿವಾಸಿಗಳಾದ ಮುಹಮ್ಮದ್ ಸಿನಾನ್ (24), ಝಹೀರ್ ನಿಸಾರ್(22) ಮತ್ತು ಚಂದು ಹಾರಿಸ್ ಎಂಬವರು ಸ್ಕೂ ಡ್ರೈವರ್ ಬಳಸಿ ಚುಚ್ಚುವ ಬೆದರಿಕೆ ಹಾಕಿ ಕಾರಿಗೆ ಹಲ್ಲೆ ನಡೆಸಿ ಸುಮಾರು 34,500 ಮೌಲ್ಯದ ದಸೊತ್ತುಗಳನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಮಡಿಕೇರಿ ಸೋಮವಾರಪೇಟೆ ನಿವಾಸಿ ಅಜಯ್ ಕೆ. ಎಂಬವರು ಪಣಂಬೂರು ಪೊಲೀಸರಿಗೆ ದೂರು ನೀಡಿದ್ದರು.
ತಕ್ಷಣ ಕಾರ್ಯಾಚರಣೆ ನಡೆಸಿದ ಪಣಂಬೂರು ವೃತ್ತ ನಿರೀಕ್ಷಕ ಸಲೀಮ್ ಅಬ್ಬಾಸ್ ನೇತೃತ್ವದ ಪೊಲೀಸ್ ತಂಡ ಮುಹಮ್ಮದ್ ಸಿನಾನ್ ಮತ್ತು ಝಹೀರ್ ನಿಸಾರ್ನನ್ನು ಬಂಧಿಸಿತ್ತು. ಈ ಪ್ರಕರಣ ಸೇರಿ ಬಂಧನಕ್ಕೆ ಬಾಕಿಯಿದ್ದ ಮೂರು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿದ್ದ ಕಸಬಾ ಬೆಂಗ್ರೆ ನಿವಾಸಿ ಚಂದು ಹಾರಿಸ್ನನ್ನು (33) ಎ.22ರಂದು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿಯ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 30ಕ್ಕೂ ಹೆಚ್ಚಿನ ಪ್ರಕರಣ ದಾಖಲಾಗಿದ್ದು, ಈತನ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ



