ಸಹೋದ್ಯೋಗಿಯ ಕೊಲೆ ಪ್ರಕರಣ: ಆರೋಪಿಗೆ ಶಿಕ್ಷೆ ಪ್ರಕಟ
ಮಂಗಳೂರು: ತಣ್ಣೀರುಬಾವಿ ಟ್ರೀ ಪಾರ್ಕ್ ಬಳಿ ಇರುವ ಮಂಗಳಾ ಬೋಟ್ ಯಾರ್ಡ್ನನಲ್ಲಿ ಸಹೋದ್ಯೋಗಿ ಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಆರೋಪಿಗೆ ಸಾದಾ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ಕೇರಳದ ಕಣ್ಣೂರು ಜಿಲ್ಲೆಯ ಕೂವೇರಿ ಚಪ್ಪರಪದವು ಮಡಂತಟ್ಟು ನೀರ್ಪೇಲ್ಡನೆ ನಿವಾಸಿ ಜಾನ್ಸನ್ ಎನ್.ವಿ. ಅಲಿಯಾಸ್ ಬಿನೋಯ್ (53) ಶಿಕ್ಷೆಗೊಳಗಾದ ಆರೋಪಿ.
ಮಂಗಳಾ ಬೋಟ್ ಯಾರ್ಡ್ನಲ್ಲಿ ಕಬ್ಬಿಣದ ಕೆಲಸ ಮಾಡಿಕೊಂಡಿದ್ದ ಬಿನು ಜಿ. ಮತ್ತು ಮರದ ಕೆಲಸ ಮಾಡಿಕೊಂಡಿದ್ದ ಜಾನ್ಸನ್ ಎನ್.ವಿ. ಅಲಿಯಾಸ್ ಬಿನೋಯ್
ಎಂಬವರ ನಡುವೆ ಹಣಕಾಸಿನ ವಿಚಾರವಾಗಿ ಜಗಳ ನಡೆದಿತ್ತು. ಈ ವೇಳೆ ಜಾನ್ಸನ್, ಬಿನು ಎಂಬಾತನಿಗೆ ಕಬ್ಬಿಣದ ರಾಡ್ನಿಂದ ಚುಚ್ಚಿ ಕೊಲೆಗೈದಿದ್ದ.
ಈ ಬಗ್ಗೆ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೆ.302 ಐಪಿಸಿ ಕಾಯ್ದೆ ಅಡಿಯಲ್ಲಿ 5 ವರ್ಷ ಸಾದಾ ಕಾರಾಗೃಹ ವಾಸ ಶಿಕ್ಷೆ ಮತ್ತು ಕಲಂ:304(2) ಐಪಿಸಿ ಕಾಯ್ದೆ ಅಡಿಯಲ್ಲಿ 25,000 ರೂ. ದಂಡ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ.




