ಝಕಿಯಾ ಕೊಲೆ ಪ್ರಕರಣ, ಆರೋಪಿ ಅರೆಸ್ಟ್
ಧಾರವಾಡ: ನಗರ ಹೊರವಲಯದ ಮನಸೂರು ಎಂಬಲ್ಲಿ ನಡೆದ ಝಕಿಯಾ ಮುಲ್ಲಾ (21) ಎಂಬ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಧಾರವಾಡ ಗ್ರಾಮೀಣ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆರೋಪಿಯನ್ನು ಕ್ಷಿಪ್ರ ಗತಿಯಲ್ಲಿ ಬಂಧಿಸಿರುವ ಪೊಲೀಸರ ನಡೆಗೆ ಪ್ರಶಂಸೆ ವ್ಯಕ್ತವಾಗಿದೆ.

ಝಕಿಯಾರನ್ನು ವಿವಾಹವಾಗಲಿದ್ದ ಸಾಬಿರ್ ಮುಲ್ಲಾ ಬಂಧಿತ ಆರೋಪಿ. ಸಾಬಿರ್ ಹಾಗೂ ಝಕಿಯಾ ಒಂದೇ ಕಾಲೇಜಿನಲ್ಲಿ ಪ್ಯಾರಾಮೆಡಿಕಲ್ ಕೋರ್ಸ್ ಕಲಿಯುತ್ತಿದ್ದು, ಪರಸ್ಪರ ಪ್ರೀತಿಸುತ್ತಿ ದ್ದರೆನ್ನಲಾಗಿದೆ. ಇವರಿಬ್ಬರ ಮದುವೆ ಬಗ್ಗೆ ಕುಟುಂಬಸ್ಥರು ಮಾತುಕತೆ ನಡೆಸಿದ್ದರು. ಅಲ್ಲದೇ ಮುಂದಿನ ತಿಂಗಳು ನಿಶ್ಚಿತಾರ್ಥದ ದಿನಾಂಕ ನಿಗದಿಯಾಗಿತ್ತು. ಈ ನಡುವೆ ಸಾಬಿರ್ ಇತರ ಹುಡುಗಿಯರ ಜೊತೆ ಸಲುಗೆಯಿಂದ ಇರುವ ಬಗ್ಗೆ ಝಕಿಯಾ ತರಾಟೆಗೆತ್ತಿಕೊಂಡಿದ್ದರು ಎನ್ನಲಾಗಿದೆ. ಇದೆಲ್ಲದರ ಪರಿಣಾಮ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಮಂಗಳವಾರ ಸಾಬಿರ್ ಝಕಿಯಾಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ.
ಪ್ಯಾರಾಮೆಡಿಕಲ್ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವತಿ ಝಕಿಯಾ ಮುಲ್ಲಾ(21) ಮಂಗಳವಾರ ಸಂಜೆ ಮನೆಯಿಂದ ಹೋದವರು ಬಳಿಕ ನಾಪತ್ತೆಯಾಗಿದ್ದರು. ಬುಧವಾರ ಬೆಳಗ್ಗೆ ಅವರ ಮೃತದೇಹ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು.
ಸಾಬಿರ್ ಮುಲ್ಲಾ ಮತ್ತು ಝಕಿಯಾ ಒಂದೇ ಕಾಲೇಜಿನಲ್ಲಿ ಪ್ಯಾರಾಮೆಡಿಕಲ್ ಮಾಡುತ್ತಿದ್ದರಿಂದ ಕಳೆದ ಮೂರು ವರ್ಷಗಳಿಂದ ಪರಿಚಯವಿದ್ದು, ಇಬ್ಬರ ನಡುವೆ ಮದುವೆ ವಿಷಯದಲ್ಲಿ ಸ್ವಲ್ಪ ಮನಸ್ತಾಪ ಬಂದಿತ್ತು. ಈ ಹಿನ್ನೆಲೆಯಲ್ಲಿ ಜ.20ರಂದು ಝಕಿಯಾಳನ್ನು ಸಾಬಿರ್ ಕೊಲೆ ಮಾಡಿದ್ದಾನೆ. ಇದರಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.





