ಕೆಯ್ಯೂರಿನಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ, ಜನರಲ್ಲಿ ಆತಂಕ
ಪುತ್ತೂರು: ಕೆಲ ಸಮಯಗಳ ಹಿಂದೆ ಜನರ ನಿದ್ದೆಗೆಡಿಸಿದ್ದ ಒಂಟಿ ಸಲಗ ಮತ್ತೆ ಕೆಯ್ಯೂರು ಗ್ರಾಮದಲ್ಲಿ ಪ್ರತ್ಯಕ್ಷಗೊಂಡಿದ್ದು ಜು.31 ರಂದು ಬೆಳಿಗ್ಗೆ ಕೆಯ್ಯೂರು ಗ್ರಾಮದ ದೇರ್ಲ ವಿನಯ ಕುಮಾರ್ ರೈಯವರ ಮನೆಯ ಎದುರಿನ ಗುಡ್ಡದಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಕಾಡಾನೆ ಇರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಲಾಗಿದ್ದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು ಆನೆಯನ್ನು ಓಡಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಾಡಾನೆ ಕೆಲ ತಿಂಗಳ ಹಿಂದೆ ಕೊಳ್ತಿಗೆ ಗ್ರಾಮದ ಹರ್ತ್ಯಡ್ಕ ಎಂಬಲ್ಲಿ ರಬ್ಬರ್ ತೋಟದೊಳಗೆ ಮಹಿಳೆಯೋರ್ವರ ಮೇಲೆ ದಾಳಿ ನಡೆಸಿದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದರು. ಆ ಬಳಿಕ ಆನೆಯನ್ನು ಕೇರಳ ಭಾಗದ ಪರಪ್ಪೆ ಅಭಯಾರಣ್ಯಕ್ಕೆ ಹಿಮ್ಮೆಟ್ಟಿಸುವ ಕಾರ್ಯ ನಡೆದಿತ್ತು. ಆನೆಯನ್ನು ಮತ್ತೆ ಸ್ವಸ್ಥಳಕ್ಕೆ ಹಿಮ್ಮೆಟ್ಟಿಸಲು ಚಿಕ್ಕಮಗಳೂರಿನಿಂದ ನುರಿತ ಎಟಿಎಫ್ ತಂಡ ಆಗಮಿಸಿತ್ತು ವಾರಗಳ ಕಾಲ ಕಾರ್ಯಾಚರಣೆ ಮಾಡಿ ಆನೆಯನ್ನು ಓಡಿಸುವ ಕಾರ್ಯವನ್ನು ಕೂಡ ಮಾಡಿತ್ತು ಆ ಬಳಿಕ ಒಂದೆರಡು ತಿಂಗಳು ಆನೆಯ ಸುಳಿವು ಇರಲಿಲ್ಲ ಎನ್ನಲಾಗಿದೆ. ಇದೀಗ ಮತ್ತೆ ಕಾಡಾನೆ ತನ್ನ ಸಂಚಾರವನ್ನು ಆರಂಭಿಸಿದೆ. ಕಾಡಾನೆ ಇರುವ ಬಗ್ಗೆ ಮಾಹಿತಿ ಪಡೆದುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಕೆಯ್ಯೂರು ದೇರ್ಲಕ್ಕೆ ಬಂದಿದ್ದು ಆನೆ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಆನೆಯನ್ನು ಸ್ಥಳದಿಂದ ಬೇರೆಡೆಗೆ ಓಡಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.



