ಸಹೋದರರ ನಡುವೆ ಜಗಳ: ಕತ್ತಿಯಿಂದ ಕಡಿದು ಗಾಯ, ಆಸ್ಪತ್ರೆಗೆ ದಾಖಲು
ಕಡಬ: ಮೂವರು ಸಹೋದರರ ನಡುವೆ ಜಗಳ
ನಡೆದು ಓರ್ವನಿಗೆ ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿ ಜು.16ರಂದು ರಾತ್ರಿ ನಡೆದಿದೆ.

ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿ ನಿವಾಸಿ ರಾಜಶೇಖರ (37ವ) ಹಲ್ಲೆಗೊಳಗಾದವರು. ಅವರ ಸಹೋದರ ಜಯರಾಜ್ ಹಲ್ಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರ ಗಾಯಗೊಂಡಿರುವ ರಾಜಶೇಖರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜು.16ರಂದು ರಾತ್ರಿ ರಾಜಶೇಖರ ಅವರು ಆಲಂಪಾಡಿಯಲ್ಲಿರುವ ತನ್ನ ಮನೆಯಲ್ಲಿದ್ದಾಗ ಅಲ್ಲಿಗೆ ಆಗಮಿಸಿದ ಅವರ ಸಹೋದರ ಮನೋಜ್ ಕುಮಾರ್ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಅವರಿಬ್ಬರ ನಡುವೆ ಜಗಳ ನಡೆದಿದೆ. ಇದೇ ವೇಳೆ ಅಲ್ಲಿಗೆ ಆಗಮಿಸಿದ ಇನ್ನೋರ್ವ ಸಹೋದರ ಜಯರಾಜ್ ತನಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾನೆ ಎಂದು ಚಂದ್ರಶೇಖರ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



