ಕರಾವಳಿ

ಹೆಜ್ಜೇನು ದಾಳಿ: ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷಗೆ ಗಾಯ

ಪುತ್ತೂರು: ಹೆಜ್ಜೇನು ದಾಳಿಯಿಂದ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ವರದಿಯಾಗಿದೆ.

ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದ ವೇಳೆ ಅದನ್ನು ತೆರವುಗೊಳಿಸುವ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮೇನಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ಲ ಮೆಣಸಿನಕಾನ ಗಾಯಗೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಈಶ್ವರಮಂಗಲ ಸಮೀಪದ ಮೇನಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಬೃಹದಾಕಾರದ ಆಲದಮರ ರಸ್ತೆಗೆ ಬಿದ್ದು ವಾಹನ ಸಂಚಾರ ಬಂದ್ ಆಗಿ ಸವಾರರು ಪರದಾಡಿದ ಮತ್ತು ನಂತರದ ಬೆಳವಣಿಗೆಯಲ್ಲಿ ಮರವನ್ನು ತೆರವುಗೊಳಿಸುವ ವೇಳೆ ಅದರೊಳಗೆ ಗೂಡು ಕಟ್ಟಿದ್ದ ಹೆಜ್ಜೇನು ಏಕಾಏಕಿ ಜನರ ಮೇಲೆ ದಾಳಿ ನಡೆಸಿದ ಘಟನೆ ಜೂ.13ರಂದು ನಡೆದಿದೆ.
ಮರ ಬಿದ್ದ ಪರಿಣಾಮ ಸುಮಾರು 4 ತಾಸುಗಳ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ತೊಂದರೆ ಅನುಭವಿಸಿದರು ಎಂದು ತಿಳಿದು ಬಂದಿದೆ.   

ಬೃಹದಾಕಾರದ ಆಲದಮರ ಬುಡ ಸಮೇತ ಉರುಳಿ ಬಿದ್ದಿದ್ದರಿಂದ ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ವಿದ್ಯುತ್ ತಂತಿಗಳು ತುಂಡಾಗಿದ್ದು ಸಂಪರ್ಕ ಕಡಿತಗೊಂಡಿದೆ.
ಬಿದ್ದ ಮರದ ತೆರವು ಕಾರ್ಯ ನಡೆಯುತ್ತಿರುವಾಗ ಟೊಳ್ಳು ಮರದ ಒಳಗಡೆ ಇದ್ದ ಹೆಜ್ಜೇನು ನೊಣಗಳು ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಸ್ಥಳದಲ್ಲಿದ್ದ ಹಲವರಿಗೆ ಹೆಜ್ಜೇನು ಕಚ್ಚಿದ್ದು ಅಲ್ಪ ಸ್ವಲ್ಪ ಗಾಯಗೊಂಡಿದ್ದಾರೆ. ಅನೇಕರು ಸ್ಥಳದಿಂದ ಓಡಿಹೋಗಿ ತಮ್ಮನ್ನು ತಾವು ರಕ್ಷಿಸಿಕೊಂಡಿದ್ದಾರೆ.
ಸ್ಥಳದಲ್ಲಿದ್ದ ಮೇನಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ಲ ಮೆಣಸಿನಕಾನ ಎಂಬವರ ತಲೆ, ಮುಖಕ್ಕೆ ಹೆಜ್ಜೇನು ಕಚ್ಚಿದ್ದು ಅವರು ಈಶ್ವರಮಂಗಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಹೆಜ್ಜೇನು ನೊಣಗಳು ಶಾಲಾ ಆವರಣದಲ್ಲಿ ಸುತ್ತು ಬರುವುದನ್ನು ಗಮನಿಸಿ ಮುಂಜಾಗ್ರತಾ ಕ್ರಮವಾಗಿ ಮೇನಾಲ ಸ.ಹಿ.ಪ್ರಾ.ಶಾಲೆಗೆ ರಜೆ ಸಾರಲಾಗಿತ್ತು.

Leave a Reply

Your email address will not be published. Required fields are marked *

error: Content is protected !!