ಕರಾವಳಿರಾಜ್ಯ

ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್  ಪ್ರತಿಭಟನೆ


ಮಂಗಳೂರು: ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಇಂದು (ಎ.18) ಅಡ್ಯಾರ್ ಶಾ ಮೈದಾನದಲ್ಲಿ ಆಯೋಜಿಸಲಾದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಬೃಹತ್  ಪ್ರತಿಭಟನೆಯಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದು ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ರಣ ಕಹಳೆ ಮೊಳಗಿಸಿದ್ದಾರೆ.



ಪ್ರತಿಭಟನಾ ಸಮಾವೇಶಕ್ಕೆ ರಾಷ್ಟ್ರೀಯ ಹೆದ್ದಾರಿಯ ಬಿಸಿ ರೋಡ್ ಮತ್ತು ಮಂಗಳೂರು ಕಡೆಯಿಂದ ವಾಹನಗಳಲ್ಲಿ ಬಂದ ಪರಿಣಾಮ ಪ್ರತಿಭಟನಾಕಾರರು ಒಂದು ಕಿ.ಮೀ ಗಿಂತಲೂ ದೂರ ವಾಹನಗಳನ್ನು ನಿಲ್ಲಿಸಿ ನಡೆದುಕೊಂಡು ಬಂದ ಸನ್ನಿವೇಶ ನಿರ್ಮಾಣ ಆಗಿತ್ತು.‌



ಮದ್ಯಾಹ್ನದ ಸುಡು ಬಿಸಿಲನ್ನೂ ಲೆಕ್ಕಿಸದೆ ನಾನಾ ಭಾಗಗಳಿಂದ ಅಡ್ಯಾರ್ ಕಣ್ಣೂರಿನತ್ತ ಜನರು ಆಗಮಿಸಿದ್ದು  ಹೆದ್ದಾರಿಯುದ್ದಕ್ಕೂ ವಾಹನ ಸಂಚಾರ ಕೆಲ ಸಮಯ ಬ್ಲಾಕ್ ಆಗಿತ್ತು. ನಗರದ ವಿವಿಧ ಕಡೆಗಳಲ್ಲಿ ಮಧ್ಯಾಹ್ನದಿಂದ ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದ ಕಾರಣ ಮೊಬೈಲ್ ನೆಟ್‌ ವರ್ಕ್ ಬಹುತೇಕವಾಗಿ ಜಾಮ್ ಆಗಿದ್ದು, ಸಂಪರ್ಕ, ಸಂವಹನಕ್ಕೆ ಕೂಡಾ ಅಡ್ಡಿಯಾಗಿತ್ತು.


ಮೈದಾನದ ಒಳಗೆ ರಾಷ್ಟ್ರಧ್ವಜಗಳೇ ರಾರಾಜಿಸಿದವು. ಪ್ರತಿಭಟನಾ ಸ್ಥಳದಲ್ಲಿ ಸೇರಿದ್ದವರು ಆಝಾದಿ ಘೋಷಣೆಗಳನ್ನು ಕೂಗುತ್ತಾ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ತಮ್ಮ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರದ ನಮಾಜ್ ಮುಗಿಸಿ ನೇರವಾಗಿ ಅಡ್ಯಾರ್ ನತ್ತ ಜನರು ಧಾವಿಸಿದ್ದರಿಂದ ಒಮ್ಮೆಲೇ ಎಲ್ಲೆಲ್ಲೂ ಜನ ಸಾಗರವೇ ಕಂಡು ಬಂದಿತ್ತು. 

Leave a Reply

Your email address will not be published. Required fields are marked *

error: Content is protected !!