ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕ ಮೃತ್ಯು- ವೈದ್ಯರ ನಿರ್ಲಕ್ಷ್ಯ ಆರೋಪ; ಪ್ರತಿಭಟನೆ
ಸುರತ್ಕಲ್: ಅಪಘಾತದಲ್ಲಿ ಕಾಲಿಗೆ ಗಾಯಗೊಂಡಿದ್ದ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಮುಂದೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಕುಳಾಯಿ ನಿವಾಸಿ ಹಸನ್ ಬಾವ ಎಂಬವರ ಪುತ್ರ ಮೊಯ್ದಿನ್ ಫರ್ಹಾನ್(16. ವ) ಮೃತ ಬಾಲಕ.
ಮಂಗಳವಾರ ರಾತ್ರಿ ಮುಕ್ಕದಲ್ಲಿ ನಡೆದ ಅಪಘಾತದಲ್ಲಿ ಫರ್ಹಾನ್ ಅವರ ಕಾಲಿನ ಭಾಗಕ್ಕೆ ಗಾಯವಾಗಿದ್ದು ಅವರನ್ನು ಸುರತ್ಕಲ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
![](https://newsbites.in/wp-content/uploads/2023/11/IMG_20231123_094519.jpg)
ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಫರ್ಹನ್ ಬೆಳಗ್ಗೆ ಎಲ್ಲರಂತೆ ಉಪಹಾರ ಸೇವಿಸಿದ್ದು ಕುಟುಂಬದವರೊಂದಿಗೆ ಮಾತನಾಡುತ್ತಾ ಸಹಜವಾಗಿ ಇದ್ದ. ಆದರೆ ಬುಧವಾರ ಕಾಲಿನ ಶಸ್ತ್ರಚಿಕಿತ್ಸೆ ಮಾಡಿದ ನಂತರ ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿದ್ದು ಫರ್ಹಾನ್ ಮೃತಪಟ್ಟಿರುವುದಾಗಿ ಆಸ್ಪತ್ರೆಯವರು ತಿಳಿಸಿದ್ದಾರೆ. ಇದಕ್ಕೆ ಸುರತ್ಕಲ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ.
ಯುವಕನ ಕುಟುಂಬಿಕರು, ಬಂಧು ಮಿತ್ರರು, ಸಾರ್ವಜನಿಕರು ಆಸ್ಪತ್ರೆ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದು ನಮಗೆ ನ್ಯಾಯ ಕೊಡಿ ಎಂದು ಅಳವತ್ತುಕೊಂಡಿದ್ದಾರೆ.