ಕರಾವಳಿರಾಜಕೀಯ

ಮಠಂದೂರುರವರ ಅಶ್ಲೀಲ ಚಿತ್ರವನ್ನು ಹರಿಯಬಿಟ್ಟವರಿಗೆ ಜನರಿಂದ ಆಯ್ಕೆಯಾದ ಶಾಸಕರ ಬಗ್ಗೆ ಮಾತನಾಡುವ ಅಧಿಕಾರ ಇಲ್ಲ: ಅಮಲ ರಾಮಚಂದ್ರ




ಪುತ್ತೂರು: ಸಂಜೀವ ಮಠಂದೂರು ಅವರು ಐದು ವರ್ಷಗಳ ಕಾಲ ಶಾಸಕರಾಗಿದ್ದ ವೇಳೆ ಅವರ ಹಿಂದೆಯೇ ಸುತ್ತುತ್ತಿದ್ದ ಬಿಜೆಪಿ‌ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಹಾಗೂ ಅವರ ಪಟಾಲಂ ಕೊನೆಗೆ ಅವರ ಅಶ್ಲೀಲ ಸೆಲ್ಫಿ ಚಿತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟು
ಅವರ ರಾಜಕೀಯ ಜೀವನವನ್ನೇ ಮುಗಿಸಿದ್ದರು ಎಂದು ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರರವರು ಆರೋಪ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.


ಶಾಸಕರ ಹೇಳಿಕೆಗೆ ತಿರುಗೇಟು ನೀಡಿದ್ದ ಸಾಜ ರಾಧಾಕೃಷ್ಣ ಆಳ್ವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅಮಳ ರಾಮಚಂದ್ರ ರವರು ಜೊತೆಗೇ ಇದ್ದು ಬೆನ್ನಿಗೆ ಚೂರಿ ಹಾಕಿದ್ದೂ ಮಾತ್ರವಲ್ಲದೆ ಚುನಾವಣೆ ಘೋಷಣೆಗೆ ಕೆಲವೇ ದಿನಗಳ ಮುಂಚೆ ಮಠಂದೂರು ರವರ ಸೆಲ್ಫಿಯನ್ನು ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟು ಅವರಿಗೆ ಬಿಜೆಪಿ ಟಿಕೆಟ್ ಸಿಗದಂತೆ ಮಾಡುವಲ್ಲಿ ಇವರುಗಳು ಯಶಸ್ವಿಯಾಗಿದ್ದರು. ಮಟಂದೂರುರವರನ್ನು ಮುಗಿಸಿದರೆ ಬಿಜೆಪಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ತಮಗೇ ಅವಕಾಶ ಸಿಗಬಹುದು ಎಂಬ ದುರಾಸೆಯಿಂದ ಮಠಂದೂರ್‌ರವರನ್ನು ಫಿನಿಶ್ ಮಾಡಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಇಂತಹ ಡಬಲ್ ಗೇಮ್ ರಾಜಕಾರಣಿಗಳಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಕಳೆದ ಚುನಾವಣೆಯ ವೇಳೆ ಮತೀಯ ಗಲಭೆ ಪ್ರಕರಣದಲ್ಲಿ ಬಜರಂಗದಳದ ಯುವಕರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದರು ಆಗ ಕರ್ನಾಟಕದಲ್ಲಿದ್ದುದೇ ಬಿಜೆಪಿ ಸರಕಾರ , ಸಂಜೀವ ಮಟಂದೂರುರವರೇ ಪುತ್ತೂರಿನ ಶಾಸಕರಾಗಿದ್ದರು. ಬಿಜೆಪಿ ಸರಕಾರವೇ ಯುವಕರ ಮೇಲೆ ಕೇಸು ದಾಖಲಿಸಿದ್ದ ಪರಿಣಾ‌ಮ ಇಂದು ಪೊಲೀಸ್ ಇಲಾಖೆ ಆರೋಪಿ ಯುವಕರಿಗೆ ಗಡಿಪಾರಿಗೆ ಆದೇಶ ಮಾಡಿದೆ . ಇದನ್ನು ಬೊಟ್ಟು ಮಾಡಿ ಮಾನ್ಯ ಶಾಸಕರು ಜನರಿಗೆ ಸತ್ಯವನ್ನು ಹೇಳಿದ್ದಾರೆ. ಈಗ ನೈಜ ವಿಷಯವನ್ನು ಅರಗಿಸಿಕೊಳ್ಳಲಾರದೆ ಇದಕ್ಕೆ ಸಂಬಂಧಪಡದ ವಿಚಾರವನ್ನು ಮೇಲೆತ್ತಿ ತಮ್ಮ ಪಕ್ಷದ ತಪ್ಪನ್ನು ಮರೆ ಮಾಚುವ ಪ್ರಯತ್ನ ಮಾಡಿದ್ದಾರೆ ಎಂದರು.

ಯುವಕರನ್ನು ಸಮಾಜ ವಿರೋಧಿ ಕೃತ್ಯಗಳಿಗೆ ಬಳಕೆ ಮಾಡಿಕೊಳ್ಳುವವರೂ ಬಿಜೆಪಿಯವರೇ, ಅವರ ಮೇಲೆ ಕೇಸು ದಾಖಲಿಸುವುದೂ ಇವರ ಸರಕಾರವೇ, ಈಗ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬೀದಿ ನಾಟಕ ಮಾಡಿ ಕಾಂಗ್ರೆಸ್ ತಲೆಗೆ ಕಟ್ಟುವ ಪ್ರಯತ್ನ ಮಾಡುವವರೂ ಇವರೇ. ಇದರಲ್ಲಿ ಕಾಂಗ್ರೆಸ್‌ನ ಪಾತ್ರ ಲವಲೇಷವೂ ಇಲ್ಲ, ಕಾನೂನು ಅದರ ಕೆಲಸವನ್ನು ಮಾಡುತ್ತಿದೆ, ಇಲಾಖೆಯ ನಿಯಮಾನುಸಾರ ಗಡಿಪಾರು ನೊಟೀಸ್ ನೀಡಲಾಗಿದೆ ಇವೆಲ್ಲಕ್ಕೂ ಅಂದಿನ ಬಿಜೆಪಿ ಸರಕಾರ ಹಾಗೂ ಪುತ್ತೂರಿನ ಆಗಿನ ಬಿಜೆಪಿ ಶಾಸಕರೇ ಜವಾಬ್ದಾರರಾಗಿದ್ದಾರೆ ಎಂದು ಅಮಳ ಹೇಳಿದರು.


ಪುತ್ತೂರು ಶಾಸಕರು ಉತ್ತಮ ರೀತಿಯಲ್ಲಿ ಅಭಿವೃದ್ದಿ ಕೆಲಸವನ್ನು ಮಾಡುತ್ತಿದ್ದಾರೆ ಇದಕ್ಕೆ ಬೆಂಬಲ ನೀಡುವ ಕೆಲಸವನ್ನು ಬಿಜೆಪಿ ಮಾಡಲಿ ಅದನ್ನು ಬಿಟ್ಟು ತಾವು ಮಾಡಿದ ತಪ್ಪನ್ನು ಕಾಂಗ್ರೆಸ್ ಮೇಲೆ ಹಾಕುವುದನ್ನು ನಿಲ್ಲಿಸಲಿ. ನಾಡಿನ ಯುವಕರು ಬಿಜೆಪಿಯವರ ಕಪಟ ಬುದ್ದಿಯನ್ನು ಅರಿತುಕೊಳ್ಳಬೇಕಿದೆ. ಒಮ್ಮೆ ಕೇಸ್ ಆದರೆ ಮತ್ತೆ ಜೀವನ ಪೂರ್ತಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಬಿಜೆಪಿಯವರ ಮಾತನ್ನು ಕೇಳಿ ಯಾವುದೇ ದುಷ್ಕೃತ್ಯಗಳನ್ನು ಮಾಡಬೇಡಿ. ನಿಮಗೆ ತೊಂದರೆಯಾದಾಗ ಯಾರೂ ಇರುವುದಿಲ್ಲ ಎಂಬುದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!