ಕರಾವಳಿ

ಸುಳ್ಯ: ಹಳೆಗೇಟು ಬಳಿ ಜೀವ ಬಲಿಗಾಗಿ ಕಾಯುತ್ತಿದೆ ರಸ್ತೆ ಮಧ್ಯದ ಕಲ್ಲು ಬಂಡೆ..!



ಸುಳ್ಯ: ಹಳೆಗೇಟು ಅಡ್ಕ ಸಮೀಪ ರಂಗಮನೆ ಹಾಗೂ ಬೆಟ್ಟಂಪಾಡಿಗೆ ಸಂಪರ್ಕಿಸುವ ರಸ್ತೆಯ ಗೋಳು ಕೇಳುವವರು ಯಾರು ಇಲ್ಲದ ಸ್ಥಿತಿಗೆ ಬಂದು ತಲುಪಿದೆ. ರಸ್ತೆ ನಡುವಲ್ಲಿ ಉಂಟಾಗಿರುವ ಹೊಂಡವನ್ನು ಮುಚ್ಚಲು ದೊಡ್ಡ ದೊಡ್ಡ ಕಲ್ಲುಬಂಡೆಗಳನ್ನು ತಂದು ಹಾಕಿ ಈ ಕಲ್ಲುಗಳು ಇಂದು ವಾಹನ ಸವಾರರ ಜೀವಬಲಿಗಾಗಿ ಕಾಯುತ್ತಿರುವಂತೆ ಕಂಡು ಬರುತ್ತಿದೆ. ದ್ವಿಚಕ್ರ ಸವಾರರಂತು ಇಲ್ಲಿ ಎಚ್ಚರ ತಪ್ಪಿದರೆ ಪ್ರಾಣಪಾಯ ಸಂಭವಿಸುವುದು ಖಚಿತ. ಅಷ್ಟೊಂದು ಭಯಾನಕ ರೀತಿಯ ದೃಶ್ಯ ರಸ್ತೆಯ ನಡುವಲ್ಲಿ ಕಂಡುಬರುತ್ತಿದೆ.

ಕಳೆದ ಎರಡು ವರ್ಷಗಳಿಂದ ಈ ಭಾಗದ ಜನರು ಈ ರಸ್ತೆಯಲ್ಲಿ ಓಡಾಡಲು ಸಂಕಷ್ಟಪಡುತ್ತಿದ್ದಾರೆ. ಇದರ ಬಗ್ಗೆ ಹಲವಾರು ಬಾರಿ ಮಾದ್ಯಮಗಳಲ್ಲಿ ವರದಿ ಬಿತ್ತರವಾದರೂ ಯಾವುದೇ ಪ್ರಯೋಜನ ಕಾಣುತ್ತಿಲ್ಲ. ಕೇವಲ ಸಣ್ಣ ವಾಹನಗಳು ಮಾತ್ರವಲ್ಲದೆ ಘನವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದು ಇಲ್ಲಿ ಶಾಶ್ವತ ಕಾಮಗಾರಿಯೊಂದಿಗೆ ಕೆಲಸ ಕಾರ್ಯಗಳು ನಡೆಯಬೇಕಾಗಿದೆ. ಅದು ಬಿಟ್ಟು ಮಳೆ ಇನ್ನಿತರ ಕಾರಣಗಳಿಂದ ಹೊಂಡ ಉಂಟಾದಾಗ ಮಣ್ಣು ಕಲ್ಲು ಇವುಗಳನ್ನು ತಂದು ಹಾಕಿ ತಾತ್ಕಾಲಿಕ ಕೆಲಸ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲವೆಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಸಂಬಂಧ ಪಟ್ಟವರು ಕೂಡಲೆ ಕ್ರಮ ಕೈಗೊಂಡು ಯಾವುದಾದರೂ ಪ್ರಾಣ ಹಾನಿ ಸಂಭವಿಸುವ ಮೊದಲು ಈ ರಸ್ತೆಯ ದುರಸ್ತಿ ಕಾರ್ಯ ಮಾಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!