ಇಸ್ರೇಲ್-ಫ್ಯಾಲಸ್ತೀನ್ ಸಂಘರ್ಷ: ಅಂತರ್ರಾಷ್ಟ್ರೀಯ ಸಮುದಾಯ ಜವಾಬ್ದಾರಿಯಿಂದ ವರ್ತಿಸಬೇಕು: ಎಸ್.ವೈ.ಎಸ್
ಇತ್ತೀಚಿನ ಕೆಲವು ದಿನಗಳಿಂದ ಭೀಕರ ಸ್ವರೂಪ ಪಡೆಯುತ್ತಿರುವ ಇಸ್ರೇಲ್- ಫಲಸ್ತೀನ್ ಯುಧ್ದವು ಸಹಸ್ರಾರು ನಾಗರಿಕರನ್ನು ಬಲಿ ತೆಗೆದುಕೊಳ್ಳುತ್ತಿದ್ದು, ಅಂತಾರಾಷ್ಟ್ರೀಯ ಸಮುದಾಯ ತಕ್ಷಣ ಎಚ್ಚೆತ್ತುಕೊಂಡು ಜವಾಬ್ದಾರಿಯುತವಾಗಿ ವರ್ತಿಸಬೇಕೆಂದು ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) ರಾಜ್ಯ ಸಮಿತಿ ಆಗ್ರಹಿಸಿದೆ.

ಇಸ್ರೇಲ್ ಮತ್ತು ಫಲಸ್ತೀನ್ ನಡುವಿನ ಶಾಂತಿ ಸಂಸ್ಥಾಪನೆಗಾಗಿ ಈಗಾಗಲೇ ಹಲವು ಒಪ್ಪಂದಗಳು ನಡೆದಿದ್ದು ಅವೆಲ್ಲವನ್ನೂ ಇಸ್ರೇಲ್ ಉಲ್ಲಂಘಿಸುತ್ತಾ ಬಂದಿದೆ. ಯಾರದೇ ಉಗ್ರ ನಿಲುವುಗಳೊಂದಿಗೆ ಸಹಮತ ಹೊಂದಲು ಸಾಧ್ಯವಿಲ್ಲ. ಅದೇ ವೇಳೆ ಸ್ವಂತ ನೆಲದಿಂದ ಅನ್ಯಾಯವಾಗಿ ಹೊರದಬ್ಬಲ್ಪಡುವ ಫಲಸ್ತೀನಿಯರ ಹಕ್ಕುಗಳ ಮರುಸ್ಥಾಪನೆಗೆ ನ್ಯಾಯೋಚಿತ ಮಧ್ಯಸ್ಥಿಕೆ ವಹಿಸಲು ಅರಬ್- ಇಸ್ಲಾಮಿಕ್ ರಾಷ್ಟ್ರಗಳು ಮತ್ತು ಜಗತ್ತಿನ ಇತರ ಪ್ರಬಲ ರಾಷ್ಟ್ರಗಳು ವಿಶೇಷ ಮುತುವರ್ಜಿ ವಹಿಸಬೇಕೆಂದು ಅದು ಕರೆನೀಡಿದೆ.
ನಿರಾಯುಧರಾದ ಜನಸಾಮಾನ್ಯರನ್ನು ಗುರಿಯಾಗಿಟ್ಟು ನಡೆಸುವ ಯಾವುದೇ ಯುಧ್ದಗಳು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇಸ್ರೇಲ್ ತನ್ನ ಕ್ರೌರ್ಯವನ್ನು ಕೊನಗೊಳಿಸಲು ಮುಂದಾಗಬೇಕೆಂದು ಎಸ್.ವೈ.ಎಸ್.ಒತ್ತಾಯಿಸಿದೆ.
ಮಂಗಳೂರಿನಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಳ್ ಸಅದಿ ಅಧ್ಯಕ್ಷತೆ ವಹಿಸಿದರು. ನಿಕಟ ಪೂರ್ವ ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಉಧ್ಘಾಟಿಸಿದರು. ಸಯ್ಯಿದ್ ಶಾಫೀ ತಂಙಳ್, ಸಯ್ಯಿದ್ ಹಾಮೀಂ ತಂಙಳ್, ಅಡ್ವೊಕೇಟ್ ಹಂಝತ್ ಉಡುಪಿ, ಅಬ್ದುಲ್ ರಹ್ಮಾನ್ ರಝ್ವಿ, ಹಸೈನಾರ್ ಆನೆಮಹಲ್, ಇಬ್ರಾಹೀಂ ಖಲೀಲ್ ಮಾಲಿಕಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಎಂ.ಬಿ.ಎಂ.ಸ್ವಾದಿಖ್ ಸ್ವಾಗತಿಸಿ ಸಂಘಟನಾ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಖ್ ಧನ್ಯವಾದ ಸಲ್ಲಿಸಿದರು.