ಕರಾವಳಿ

ಪುತ್ತೂರು ಕಲ್ಲಿಮಾರ್‌ನಲ್ಲಿ ಬ್ರೈಟ್ ಭಾರತ್ ಸಂಸ್ಥೆಯ ಕಚೇರಿ ಉದ್ಘಾಟನೆ 



ಪುತ್ತೂರು: ಬಡವರ ಕನಸಿಗೆ ಬೆಳಕಾಗುವ ವಿಶಿಷ್ಟ ಯೋಜನೆಗಳನ್ನೊಳಗೊಂಡ ಬ್ರೈಟ್ ಭಾರತ್ ಸಂಸ್ಥೆಯ ಕಚೇರಿ ಅ.9ರಂದು ಪುತ್ತೂರು ಕಲ್ಲಿಮಾರ್‌ನಲ್ಲಿರುವ ಕೀರ್ತನಾ ಪ್ಯಾರಡೈಸ್‌ನಲ್ಲಿ ಶುಭಾರಂಭಗೊಂಡಿತು. ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಬ್ರೈಟ್ ಭಾರತ್ ಸಂಸ್ಥೆ ಉತ್ತಮ ಕಾರ್ಯಚಟುವಟಿಕೆ ಮೂಲಕ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಹೇಳಿದರು. ಅಝರ್ ಶಾ ಅವರ ಬಗ್ಗೆ ನನಗೆ ಕಳೆದ ಐದು ತಿಂಗಳಿನಿಂದ ಗೊತ್ತಿದೆ. ಒಬ್ಬ ಸಾಹಸಿ ಯುವಕ. ಅಝರ್ ಮತ್ತು ತಂಡದವರು ಉತ್ತಮ ಕಾರ್ಯಚಟುವಟಿಕೆ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದು ಮುಂದಕ್ಕೂ ಅಂತಹ ಉತ್ತಮ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಬ್ರೈಟ್ ಭಾರತ್ ಸಂಸ್ಥೆ ಪುತ್ತೂರಿನ ಜನರ ಮನಸ್ಸನ್ನು ಗೆಲ್ಲುವಂತಾಗಲಿ, ಯಶಸ್ಸು ನಿಮ್ಮದಾಗಲಿ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಆರು ಜನರ ಯುವಕರ ತಂಡ ಸೇರಿಕೊಂಡು ದೊಡ್ಡದಾದ ಯೋಜನೆ ಯೋಚನೆಯೊಂದಿಗೆ ಹೆಜ್ಜೆ ಹಾಕಿದ್ದು ಮೊದಲೇ ಸಮಾಜದಲ್ಲಿ ಇವರು ಗುರುತಿಸಿಕೊಂಡಿರುವ ಕಾರಣ ಇವರು ಹಮ್ಮಿಕೊಂಡಿರುವ ಲಕ್ಕಿ ಸ್ಕೀಂ ಯಶಸ್ವಿವಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಆಧುನಿಕ ಜಗತ್ತಿನಲ್ಲಿ ಜನರಿಗೆ ಎಷ್ಟೇ ವ್ಯವಸ್ಥೆಗಳಿದ್ದರೂ ಸಾಕಾಗುವುದಿಲ್ಲ, ಲೈಫ್ ಸ್ಟೈಲ್, ಹೈಫೈ, ಶೋಕಿ ಜೀವನದತ್ತ ಜನರು ಮಾರು ಹೋಗುತ್ತಿರುವ ಸಂದರ್ಭದಲ್ಲಿ ಅವಕಾಶಗಳನ್ನು ಹುಡುಕಿಕೊಂಡು ಹೋಗುವುದು ಹೆಚ್ಚಾಗುತ್ತಿದೆ. ೨೫ ವರ್ಷಗಳ ಹಿಂದೆ ಐಷಾರಾಮಿ ವಸ್ತುವಾಗಿದ್ದ ಬೈಕ್, ಕಾರು ಇಂದು ಅವಶ್ಯಕ ವಸ್ತುವಾಗಿ ಮಾರ್ಪಾಡಾಗಿದೆ ಎಂದರು. ಯುವಕರು ಸೇರಿಕೊಂಡು ಒಳ್ಳೆಯ ಕಾರ್ಯವನ್ನು ಇಲ್ಲೇ ಮಾಡಿದಾಗ ಇಲ್ಲಿ ಒಂದಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ ಮತ್ತು ಸ್ವಾಭಿಮಾನದಿಂದ ಜೀವನ ನಡೆಸಲು ಪ್ರಯತ್ನಿಸಬೇಕು. ಬ್ರೈಟ್ ಭರತ್ ಸಂಸ್ಥೆ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಜೆಡಿಎಸ್ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಕಲ್ಲೇಗ ಮಾತನಾಡಿ ಆರು ಮಂದಿ ಯುವಕರು ಸೇರಿಕೊಂಡು ಮಾಡಿರುವ ಬ್ರೈಟ್ ಭಾರತ್ ಎನ್ನುವ ಸಂಸ್ಥೆ ಬೆಳೆಯಬೇಕು. ಮುಂದಾಲೋಚನೆಯೊಂದಿಗೆ ಹೆಜ್ಜೆಯಿಡಿ, ಯಶಸ್ಸು ಖಚಿತ ಎಂದು ಹೇಳಿದರು.

ನ್ಯಾಯವಾದಿ, ನೋಟರಿ ನೂರುದ್ದೀನ್ ಸಾಲ್ಮರ ಮಾತನಾಡಿ ಬ್ರೈಟ್ ಭಾರತ್ ಸಂಸ್ಥೆಯವರು ನಂಬಿಕೆ ಉಳಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಾರೆನ್ನುವ ಭರವಸೆ ನನಗಿದೆ. ಜವಾಬ್ದಾರಿ ತುಸು ಹೆಚ್ಚಿದ್ದು ಅದನ್ನು ನಿಭಾಯಿಸಿಕೊಂಡು ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.

ಪ್ರಾಣಿ ಪ್ರೇಮಿ ರಾಜೇಶ್ ಬನ್ನೂರುರವರಿಗೆ ಸನ್ಮಾನ:

ಬೀದಿ ನಾಯಿಗಳಿಗೆ ಹಾಗೂ ಇತರ ಪ್ರಾಣಿಗಳಿಗೆ ದಿನನಿತ್ಯ ಆಹಾರ ನೀಡುತ್ತಿರುವ ಪುರಸಭೆಯ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಅವರನ್ನು ಬ್ರೈಟ್ ಭಾರತ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ರಾಜೇಶ್ ಬನ್ನೂರು ಮಾತನಾಡಿ ಪ್ರಕೃತಿಯನ್ನು, ಪ್ರಾಣಿಗಳನ್ನು ನಾವೆಲ್ಲರೂ ಪ್ರೀತಿಸಬೇಕು ಆ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸಬೇಕು ಎಂದರು.

ಸಮಾಜ ಸೇವಕರಿಬ್ಬರಿಗೆ ಸನ್ಮಾನ:

ರೋಗಿಗಳ ಪಾಲಿನ ಆಪತ್ಭಾಂಧವರಾಗಿ ಗರುತಿಸಿಕೊಂಡಿರುವ ಅಲಿ ಪರ್ಲಡ್ಕ ಮತ್ತು ಇಫಾಝ್ ಬನ್ನೂರು ಅವರನ್ನು ಬ್ರೈಟ್ ಭಾರತ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಅಶಕ್ತರಿಗೆ ವ್ಹೀಲ್ ಚೆಯರ್ ವಿತರಣೆ:

ಕಾರ್ಯಕ್ರಮದಲ್ಲಿ ಇಬ್ಬರು ಅಶಕ್ತರಿಗೆ ವ್ಹೀಲ್ ಚೆಯರ್ ವಿತರಿಸುವ ಮೂಲಕ ಬ್ರೈಟ್ ಭಾರತ್ ಸಂಸ್ಥೆಯ ಮಾನವೀಯ ಕಳಕಳಿ ಮೆಚ್ಚುಗೆಗೆ ಪಾತ್ರವಾಯಿತು.

6 ಮಂದಿ ಸ್ನೇಹಿತರು ಸೇರಿಕೊಂಡು ಸ್ಥಾಪಿಸಿದ ಸಂಸ್ಥೆ:

ಸ್ವಾಗತಿಸಿದ ಬ್ರೈಟ್ ಭಾರತ್ ಸಂಸ್ಥೆಯ ಪಾಲುದಾರ ಅಶ್ರಫ್ ಸವಣೂರು ಮಾತನಾಡಿ ಬ್ರೈಟ್ ಭಾರತ್ ಎನ್ನುವುದು ನಮ್ಮ ಕನಸಿನ ಯೋಜನೆಯಾಗಿದ್ದು ಬೇರೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಂಡ ಆರು ಮಂದಿ ಸ್ನೇಹಿತರು ಸೇರಿಕೊಂಡು ಸ್ಥಾಪಿಸಿದ ಸಂಸ್ಥೆಯಾಗಿದೆ. ನಮ್ಮಿಂದ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ಕನಸಿನೊಂದಿಗೆ ನಾವು ಸಂಸ್ಥೆಯನ್ನು ಕಟ್ಟಿದ್ದು ಈ ಸಂಸ್ಥೆಯಡಿಯಲ್ಲಿ ಸಿವಿಲ್ ಇಂಜಿನಿಯರ‍್ಸ್, ಬಿಲ್ಡಿಂಗ್ ಕನ್ಸ್ಟ್ರಕ್ಷನ್ಸ್, ಆಪ್ ಡೆವಲಪ್‌ಮೆಂಟ್, ಇವೆಂಟ್ ಮೆನೇಜ್‌ಮೆಂಟ್ ಸೇರಿದಂತೆ ಅನೇಕ ಯೋಜನೆಗಳನ್ನು ಹಾಕಿಕೊಂಡು ಮೂರನೇ ಅತೀ ದೊಡ್ಡ ಪ್ರಾಜೆಕ್ಟ್ ಆಗಿ ನಾಲ್ಕು ಸುಸಜ್ಜಿತ ಮನೆಗಳನ್ನು ಬಂಪರ್ ಬಹುಮಾನವಾಗಿ ಕೊಡುವ  ಸ್ಕೀಂ ಯೋಜನೆ ಕೂಡಾ ಹಮ್ಮಿಕೊಂಡಿದ್ದೇವೆ ಎಂದರು. ನಮ್ಮದು ಲಾಭದ ಉದ್ದೇಶಕ್ಕಿಂತ ಮಿಗಿಲಾಗಿ ಗ್ರಾಹಕರ ನಂಬಿಕೆ ನಮಗೆ ಮುಖ್ಯ ಎನ್ನುವ ಉದ್ದೇಶದೊಂದಿಗೆ ಕಾರ್ಯಚಟುವಟಿಕೆಯನ್ನು ಪ್ರಾರಂಭಿಸಿದ್ದೇವೆ. ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹ, ಸಹಕಾರವನ್ನು ನಾವು ಬಯಸುತ್ತಿದ್ದೇವೆ. ಈಗಾಗಲೇ ಮೂರು ಸಾವಿರಕ್ಕಿಂತಲೂ ಅಧಿಕ ಸದಸ್ಯರು ನಮ್ಮ ಮೇಲೆ ಭರವಸೆಯಿಟ್ಟು ಸದಸ್ಯತ್ವ ಪಡೆದುಕೊಂಡಿದ್ದಾರೆ ನಿಮ್ಮೆಲ್ಲರ ಭರವಸೆಯನ್ನು ಬ್ರೈಟ್ ಭಾರತ್ ಈಡೇರಿಸುತ್ತದೆ ಎಂದು ಅವರು ಹೇಳಿದರು.

ಪ್ರಮುಖರಾದ ಎನ್ ಚಂದ್ರಹಾಸ ಶೆಟ್ಟಿ, ಸಚಿನ್‌ರಾಜ್ ಶೆಟ್ಟಿ, ಅಸ್ಗರ್ ಮುಡಿಪು, ನವೀನ್ ಕುಲಾಲ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ನಿಹಾಲ್ ಶೆಟ್ಟಿ ಮೊದಲಾದವರು ಮಾತನಾಡಿ ಬ್ರೈಟ್ ಭಾರತ್ ಸಂಸ್ಥೆಗೆ ಶುಭ ಹಾರೈಸಿದರು.

ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ, ಪ್ರಮುಖರಾದ ಬಶೀರ್ ಪರ್ಲಡ್ಕ, ಅನೀಶ್ ಶೆಟ್ಟಿ, ಸಿರಾಜ್ ಕೂರ್ನಡ್ಕ, ಗಣೇಶ್ ಶೆಟ್ಟಿ, ಅನ್ವರ್ ಖಾಸಿಂ, ಶರೀಫ್ ಬಲ್ನಾಡ್, ಮಹಮ್ಮದ್ ಕುಂಞಿ ಬಾಬಾ, ದಾವೂದ್ ತಾಜ್, ಫಾರೂಕ್ ಎಂ.ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಕಚೇರಿ ಶುಭಾರಂಭ ಪ್ರಯುಕ್ತ ಮೂರು ತಲಾ ಮೂರು ಗೋಲ್ಡ್ ರಿಂಗ್ ಹಾಗೂ ಬಂಪರ್ ಬಹುಮಾನವಾಗಿ ಹೋಂಡಾ ಶೈನ್ ಬೈಕ್‌ನ್ನು ಅದೃಷ್ಟ ಬಹುಮಾನವಾಗಿ ಡ್ರಾ ತೆಗೆಯುವುದಾಗಿ ಘೋಷಿಸಲಾಗಿತ್ತು. ಅದರಂತೆ ಸಭಿಕರ ಸಮ್ಮುಖದಲ್ಲಿ ಅತಿಥಿಗಳು  ಪ್ರಥಮ ಗೋಲ್ಡ್ ರಿಂಗ್‌ಗಾಗಿ ಅದೃಷ್ಟ ಚೀಟಿ ಎತ್ತಿದಾಗ ೪೬೫೭ ನಂಬರ್ ಆತೂರಿನ ಫಾತಿಮಾ ಅಫೀಫಾ ವಿಜೇತರಾದರು. ದ್ವಿತೀಯ ಬಹಮಾನವಾದ ಗೋಲ್ಡ್ ರಿಂಗ್‌ಗಾಗಿ ಅದೃಷ್ಟ ಚೀಟಿ ಎತ್ತಿದಾಗ ೨೯೧೪ ನಂಬರ್ ಮೋಕ್ಷ್ ಪಿ ಕೆಮ್ಮಾಯಿ ವಿಜೇತರಾದರು. ಮೂರನೇ ಬಹುಮಾನವಾದ ಗೋಲ್ಡ್ ರಿಂಗ್‌ಗಾಗಿ ಅದೃಷ್ಟ ಚೀಟಿ ಎತ್ತಿದಾಗ ೪೬೩೫ ವಿ.ಜೆ ಸಾಗರ್ ಬೆಳ್ಳಾರೆ ವಿಜೇತರಾದರು. ಬಂಪರ್ ಬಹುಮಾನವಾಗಿದ್ದ ಹೋಂಡಾ ಶೈನ್‌ಗಾಗಿ ನಡೆದ ಅದೃಷ್ಟ ಚೀಟಿ ಎತ್ತುವಿಕೆಯಲ್ಲಿ ೧೪೬೦ ನಂಬರ್ ಅನ್ವರ್ ಅರಂಬೂರು ಸುಳ್ಯ ಅವರು ಅದೃಷ್ಟಶಾಲಿ ವಿಜೇತರಾದರು. ವಿಜೇತರನ್ನು ಸ್ಥಳದಿಂದಲೇ ಸಂಪರ್ಕಿಸಿ ಮಾಹಿತಿ ನೀಡಲಾಯಿತು. ಪಾಲುದಾರ ಅಝರ್ ಶಾ ಅವರು ಅದೃಷ್ಟ ಡ್ರಾ ಪ್ರಕ್ರಿಯೆಯ ಮಾಹಿತಿ ನೀಡಿದರು.

ಗಮನ ಸೆಳೆದ ಸಂಗೀತ ರಸಸಂಜೆ:

ಬ್ರೈಟ್ ಭಾರತ್ ಸಂಸ್ಥೆಯ ಉದ್ಘಾಟನೆ ಪ್ರಯುಕ್ತ ಸಂಗೀತ ರಸಮಂಜರಿ ಏರ್ಪಡಿಸಲಾಗಿತ್ತು. ಗಾಯಕರಾದ ಸಮದ್ ಗಡಿಯಾರ್, ಅರ್ಫಾಝ್ ಉಳ್ಳಾಲ್

ಫಾಝಿಲ್ ಪರ್ತಿಪ್ಪಾಡಿ ಅವರ ಗಾಯನ ಗಮನ ಸೆಳೆಯಿತು. ನಮ್ಮ ಟಿವಿಯ ಆಂಕರ್ ಸಿಶಾನ್ ಕೌಡೂರು ಕಾರ್ಯಕ್ರಮ ನಿರೂಪಿಸಿದರು.

ನಮ್ಮದು ನೂರಕ್ಕೆ ನೂರು ಪಾರದರ್ಶಕ ಲಕ್ಕಿ ಸ್ಕೀಂ ಆಗಿದ್ದು 20 ತಿಂಗಳು ಈ ಸ್ಕೀಂ ನಡೆಯಲಿದೆ. ಲಕ್ಕಿ ಡ್ರಾ ವಿವಿಧ ಮಾಧ್ಯಮಗಳ ಮೂಲಕ ನೇರ ಪ್ರಸಾರ ಮಾಡುವ ಪಾರದರ್ಶಕತೆಯನ್ನು ಮತ್ತಷ್ಟು ಹೆಚ್ಚಿಸಿದ್ದೇವೆ. ನಮ್ಮ ಬ್ರೈಟ್ ಭಾರತ್ ಯೋಜನೆಗೆ ಸೇರಿದವರಿಗೆ ಯಾವುದೇ ಸಂಶಯಗಳಿದ್ದಲ್ಲಿ ಅಥವಾ ಮಾಹಿತಿ ಬೇಕಾದಲ್ಲಿ ಸಂಸ್ಥೆಯ ಕಚೇರಿಯನ್ನು ಇಲ್ಲವೇ ಸಂಸ್ಥೆಯ ಮುಖ್ಯಸ್ಥರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪಾಲುದಾರರಾದ ಅಝರ್ ಶಾ ಕುಂಬ್ರ, ಅಶ್ರಫ್ ಸವಣೂರು, ಅಫ್ರೀದ್, ಅಸ್ಲಂ, ಜೌಹರ್, ಅನ್ಸಾರ್ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸಿದವರಲ್ಲಿ ಓರ್ವರಿಗೆ ಅದೃಷ್ಟ ಬಹುಮಾನವಾಗಿ ರೂ.5000 ಸಾವಿರ ನಗದು ಘೋಸಿಸಲಾಗಿತ್ತು. ಅದರಂತೆ ನೂರಾರು ಮಂದಿ ತಮ್ಮ ಹೆಸರನ್ನು ಬರೆದು ಅದೃಷ್ಟ ಪೆಟ್ಟಿಗೆಗೆ ಹಾಕಿದ್ದರು. ಕೊನೆಯಲ್ಲಿ ಶಾಸಕ ಅಶೊಕ್ ರೈ ಮೂಲಕ ಡ್ರಾ ಎತ್ತಿದಾಗ ನಾರಾಯಣ ಬಿ ಕಾವು ಅವರು ರೂ.5000 ಅದೃಷ್ಟ ಶಾಲಿಯಾಗಿ ಹೊರಹೊಮ್ಮಿದರು.

Leave a Reply

Your email address will not be published. Required fields are marked *

error: Content is protected !!