ಜಾಲ್ಸೂರು: ಹೆಚ್ಚುತ್ತಿರುವ ವಾಹನ ಅಪಘಾತಗಳು,ರಸ್ತೆ ದಾಟುತ್ತಿದ್ದ ಬಾಲಕಿಗೆ ಅಂಬ್ಯುಲೆನ್ಸ್ ಢಿಕ್ಕಿ ಬಾಲಕಿಯ ಕಾಲಿಗೆ ಗಾಯ ಆಸ್ಪತ್ರೆಗೆ ದಾಖಲು
ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರ್ ಪ್ರದೇಶದಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಒಂದರ ಮೇಲೊಂದರಂತೆ ವಾಹನ ಅಪಘಾತಗಳು ನಡೆಯುತ್ತಿದೆ.
ಹತ್ತು ದಿನಗಳ ಅಂತರದಲ್ಲಿ ಎರಡು ಅಪಘಾತಗಳು ನಡೆದು ನಾಲ್ಕು ಮಂದಿ ಪಾದಾಚಾರಿಗಳು ಮೃತಪಟ್ಟ ಘಟನೆ ನಡೆದಿದ್ದವು. ಅದಲ್ಲದೆ ಸಣ್ಣಪುಟ್ಟ ವಾಹನ ಅಪಘಾತಗಳು ಆ ಪ್ರದೇಶದಲ್ಲಿ ಮಾಮೂಲಿಯಾಗಿ ಕಾಣುತ್ತಿದೆ. ಅದೇ ರೀತಿಯ ಎರಡು ಘಟನೆಗಳು ಇಂದು ಸಂಭವಿಸಿದ್ದು ಬೆಳಿಗ್ಗೆ ದ್ವಿಚಕ್ರ ವಾಹನ ಸವಾರನಿಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಮಾಸುವ ಮುನ್ನವೇ ಸಂಜೆ ಮತ್ತೊಂದು ವಾಹನ ಅಪಘಾತ ಸಂಭವಿಸಿದೆ.

ರಸ್ತೆ ದಾಟುತ್ತಿದ್ದ ಪ್ರೌಢಶಾಲಾ ಬಾಲಕಿಗೆ ಖಾಸಗಿ ಆಸ್ಪತ್ರೆಯ ಅಂಬ್ಯುಲೆನ್ಸ್ ಢಿಕ್ಕಿ ಹೊಡೆದು ಬಾಲಕಿಯ ಕಾಲಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಾಲ್ಸೂರಿನಲ್ಲಿ ಸೆ.12ರಂದು ಸಂಜೆ ಸಂಭವಿಸಿದೆ.
ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಕನಕಮಜಲು ಗ್ರಾಮದ ಸುಣ್ಣಮೂಲೆ ನಿವಾಸಿ ನಾರಾಯಣ ಮೂಲ್ಯ ಎಂಬವರ ಪುತ್ರಿ ಯೋಗಿನಿ ಎಂಬ ಬಾಲಕಿ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಜಾಲ್ಸೂರಿನ ಜೆ.ಕೆ. ಕಾಂಪ್ಲೆಕ್ಸ್ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಇಂದು ಬೆಳಿಗ್ಗೆ ಕನಕಮಜಲಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ, ಹಿಂತಿರುಗಿ ಬರುತ್ತಿದ್ದ ಸುಳ್ಯದ ಖಾಸಗಿ ಆಸ್ಪತ್ರೆಯ ಅಂಬ್ಯುಲೆನ್ಸ್ ಢಿಕ್ಕಿ ಹೊಡೆದಿದ್ದು, ಬಾಲಕಿ ರಸ್ತೆಗೆ ಬಿದ್ದು ಕಾಲಿಗೆ ಗಾಯಗೊಂಡಿದ್ದು, ಅದೇ ಅಂಬ್ಯುಲೆನ್ಸ್ ಮೂಲಕ ಗಾಯಗೊಂಡ ಬಾಲಕಿಯನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.
ಆದ್ದರಿಂದ ಸಂಬಂಧಪಟ್ಟ ಇಲಾಖೆಗಳು ಆದಷ್ಟು ಶೀಘ್ರದಲ್ಲಿ ಇತ್ತ ಗಮನ ಹರಿಸಿ ಹೆಚ್ಚುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬ್ಯಾರಿಕೇಡ್ ಅಥವಾ ಎಚ್ಚರಿಕೆ ಫಲಕ ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.