ನಂದಕುಮಾರ್’ರವರಿಂದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ
ಕೊಡಗು ಜಿಲ್ಲಾ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಶ್ರಮವಹಿಸಿದ ಬಿ ನಂದಕುಮಾರ್ ರವರು ಬೆಂಗಳೂರು ಕೆಪಿಸಿಸಿ ಕಛೇರಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಭೇಟಿ ಮಾಡಿ ಕೊಡಗು ಜಿಲ್ಲೆಯ ಮುಖ್ಯ ಬೆಳೆಯಲ್ಲಿ ಒಂದಾದ ಏಲಕ್ಕಿ ಹಾರವನ್ನು ಹಾಕಿ ಶುಭ ಕೋರಿದರು.
ಕೆಪಿಸಿಸಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಂಯೋಜಕ ಎಂ ವೆಂಕಪ್ಪಗೌಡ ಸುಳ್ಯ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು. ನಂದಕುಮಾರ್ ಅವರು ಈ ಬಾರಿ ಸುಳ್ಯ ಕ್ಷೇತ್ರದ ಆಕಾಂಕ್ಷಿಯಾಗಿದ್ದು ಕೊನೆ ಕ್ಷಣದಲ್ಲಿ ಅವರಿಗೆ ಟಿಕೆಟ್ ಸಿಗದೇ ಜಿ ಕೃಷ್ಣಪ್ಪ ಅವರಿಗೆ ಟಿಕೆಟ್ ದೊರಕಿತ್ತು. ಪ್ರಾರಂಭದಲ್ಲಿ ನಂದಕುಮಾರ್ ಬೆಂಬಲಿಗರು ನಂದಕುಮಾರ್ ಅವರಿಗೆ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಪ್ರತ್ಯೇಕ ಸಭೆ ನಡೆಸಿದ್ದರು. ಬಳಿಕ ಕೃಷ್ಣಪ್ಪ ಅವರ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವಂತೆ ಎಲ್ಲರೂ ನಿರ್ಧಾರ ತೆಗೆದುಕೊಂಡಿದ್ದರು. ಆ ಬಳಿಕ ನಂದಕುಮಾರ್ ಅವರನ್ನು ಮಡಿಕೇರಿ ಕ್ಷೇತ್ರದ ಉಸ್ತುವಾರಿಯನ್ನಾಗಿ ಕೆಪಿಸಿಸಿ ನಿಯೋಜನೆ ಮಾಡಿತ್ತು. ಪಕ್ಷದ ತೀರ್ಮಾನದಂತೆ ಜವಾಬ್ದಾರಿ ವಹಿಸಿಕೊಂಡ ನಂದಕುಮಾರವರು ಹಗಲು ರಾತ್ರಿ ಪಕ್ಷಕ್ಕಾಗಿ ಕೆಲಸ ಮಾಡಿದ್ದರು. ಮಡಿಕೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿಯನ್ನು ಬಾರಿಸಿದ್ದರು. ಸುಳ್ಯದಲ್ಲಿ ಟಿಕೆಟ್ ವಂಚಿತವಾದರೂ ಮಡಿಕೇರಿಯಲ್ಲಿ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ ನಂದಕುಮಾರ್ ಅವರ ಕಾರ್ಯವೈಖರಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿತ್ತು. ನಂದಕುಮಾರ್ ಅವರಿಗೆ ಪಕ್ಷದಲ್ಲಿ ಇನ್ನಷ್ಟು ದೊಡ್ಡ ಸ್ಥಾನಮಾನ ನೀಡಬೇಕೆಂಬ ಆಗ್ರಹವೂ ಕೇಳಿಬಂದಿದೆ.