ಸುಳ್ಯ: ಕಾಂಗ್ರೆಸ್ ಟಿಕೆಟ್ ಬಿಕ್ಕಟ್ಟು, ರಮಾನಾಥ ರೈ ನೇತೃತ್ವದಲ್ಲಿ ಸಭೆ:ನಂದಕುಮಾರ್ ಅವರಿಗೆ ಟಿಕೆಟ್ ಫೈನಲ್ ಮಾಡಲು ಅಭಿಮಾನಿಗಳ ಪಟ್ಟು
ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗೊಂದಲ ವಿಚಾರದಲ್ಲಿ ಕೆಪಿಸಿಸಿ ಸೂಚನೆ ಮೇರೆಗೆ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದ ನಿಯೋಗ ಸುಳ್ಯದಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡುವ ಕಾರ್ಯವನ್ನು ಮಾಡಿದ್ದು ಈ ವೇಳೆ ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕೆನ್ನುವ ಆಗ್ರಹ ಜೋರಾಗಿ ಕೇಳಿ ಬಂದಿದೆ.
ಈಗಾಗಲೇ ಜಿ.ಕೃಷ್ಣಪ್ಪ ಅವರಿಗೆ ಟಿಕೆಟ್ ಘೋಷಣೆಯಾಗಿದ್ದರೂ ಕೂಡಾ ಸುಳ್ಯ ಕ್ಷೇತ್ರದ ಪ್ರಬಲ ಆಕಾಂಕ್ಷಿ ನಂದಕುಮಾರ್ ಅವರಿಗೆ ಬಿ.ಫಾರಂ ನೀಡಬೇಕೆಂದು ಅವರ ಅಭಿಮಾನಿ ಬಳಗದವ ಪ್ರತಿಭಟನೆ, ಒತ್ತಡ ಹೆಚ್ಚಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕೃಷ್ಣಪ್ಪ ಹಾಗೂ ನಂದಕುಮಾರ್ ಅವರನ್ನು ಬೆಂಗಳೂರಿಗೆ ಕರೆಸಿ ಮಾತುಕತೆ ನಡೆಸಿದ್ದರು. ಆ ವೇಳೆಯೂ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ರಮಾನಾಥ ರೈ ಅವರಿಗೆ ಕರೆ ಮಾಡಿ ಸುಳ್ಯಕ್ಕೆ ತೆರಳಿ ಸಭೆ ನಡೆಸಿ ವಸ್ತುಸ್ಥಿತಿ ಅರಿತು ವರದಿ ನಿಡುವಂತೆ ಹೇಳಿದ್ದರು. ಅದರಂತೆ ಎ.15ರಂದು ಸಂಜೆ ರಮಾನಾಥ ರೈ ಅವರು ಸುಳ್ಯಕ್ಕೆ ತೆರಳಿ ಸಭೆ ನಡೆಸಿದ್ದು ಸಭೆಯಲ್ಲಿ ನಂದಕುಮಾರ್ ಮತ್ತು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು.
ಸಭೆಯಲ್ಲಿ ಟಿಕೆಟ್ ವಿಚಾರವಾಗಿ ಚರ್ಚೆ ನಡೆದಿದೆ. ನಂದಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಅವರ ಅಭಿಮಾನಿಗಳು ಪಟ್ಟು ಹಿಡಿದಿದ್ದು ಈ ವೇಳೆ ನೂಕು ನುಗ್ಗಲು ಕೂಡಾ ನಡೆದಿದೆ. ಸುಮಾರು 500ಕ್ಕೂ ಅಧಿಕ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದು ನಂದಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ತೀವ್ರ ಒತ್ತಡ ಹೇರಿದ್ದಾರೆ. ಈ ವೇಳೆ ಸಭೆಯಲ್ಲಿ ಗದ್ದಲ, ಗೊಂದಲ, ಮಾತಿನ ಚಕಮಕಿ ಕೂಡಾ ನಡೆದಿದೆ. ಆಕ್ರೋಶಿತ ಕಾರ್ಯಕರ್ತರನ್ನು ಖುದ್ದು ನಂದಕುಮಾರ್ ಅವರೇ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಕೃಷ್ಣಪ್ಪ ಅವರ ಅಭಿಮಾನಿಗಳು ಕೂಡಾ ಸಭೆಯಲ್ಲಿದ್ದರಾದರೂ ಕೃಷ್ಣಪ್ಪ ಅವರು ಮಾತ್ರ ಗೈರಾಗಿದ್ದರು.
ಕಾರ್ಯಕರ್ತರ ಅಭಿಪ್ರಾಯವನ್ನು ರಮಾನಾಥ ರೈ ಮತ್ತು ನಿಯೋಗ ಪಡೆಯುವ ಪ್ರಯತ್ನ ಮಾಡಿದರಾದರೂ ನಂದಕುಮಾರ್ ಅವರಿಗೆ ಬಿ.ಫಾರಂ ನೀಡಬೇಕೆನ್ನುವ ಕೂಗು ಜೋರಾಗಿ ಕೇಳಿ ಬಂತು.
ನಂದಕುಮಾರ್ ಅವರಿಗೆ ಟಿಕೆಟ್ ನೀಡಿದರೆ ಮಾತ್ರ ಇಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯ. ಹಾಗಾಗಿ ಹೈಕಮಾಂಡ್ ತಪ್ಪು ಮಾಡುವುದು ಬೇಡ, ಕೂಡಲೇ ಬಿ.ಫಾರಂ ನಂದಕುಮಾರ್ಗೆ ನೀಡಿ, ನಾವು ಗೆಲ್ಲಿಸಿ ತೋರಿಸುತ್ತೇವೆ, ನಂದಕುಮಾರ್ ಅವರನ್ನು ಗೆಲ್ಲಿಸಲು ಬೇಕಾಗಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಕೆಲಸ ಮಾಡಲು ಸಿದ್ದಗೊಂಡಿದ್ದಾರೆ ಎಂದು ಸೇರಿದ್ದವರು ಹೇಳಿಕೊಂಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು.