ಕರಾವಳಿರಾಜಕೀಯ

ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ನಂದಕುಮಾರ್’ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಮತ್ತೊಂದು ಹೋರಾಟಕ್ಕೆ ವೇದಿಕೆ ಸಜ್ಜು?- ಬೃಹತ್ ಸಮಾವೇಶಕ್ಕೆ ಸಿದ್ಧತೆ



ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನಂದಕುಮಾರ್ ಅವರಿಗೆ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಂದಕುಮಾರ್ ಅಭಿಮಾನಿ ಬಳಗದವರ ಹೋರಾಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ಬೆಂಗಳೂರಿನಲ್ಲಿ ನಾಯಕರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದರು. ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.


ಎಪ್ರಿಲ್ 9ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ನಿಂತಿಕಲ್ನಲ್ಲಿ ನಂದಕುಮಾರ್ ಅಭಿಮಾನಿ ಬಳಗದ ವತಿಯಿಂದ ಬೃಹತ್ ಸಮಾವೇಶ ನಡೆಸಲು ಸಿದ್ದತೆ ನಡೆಸಲಾಗಿದ್ದು ಈ ಬಗೆಗಿನ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.


ಈಗಾಗಲೇ ಸುಳ್ಯ ಕ್ಷೇತ್ರಕ್ಕೆ ಜಿ.ಕೃಷ್ಣಪ್ಪ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದೆ. ಅವರನ್ನು ಬದಲಾಯಿಸಿ ನಂದಕುಮಾರ್ ಅವರಿಗೆ ನೀಡಬೇಕೆನ್ನುವುದು ಹಲವು ಕಾರ್ಯಕರ್ತರ ಮತ್ತು ಅಭಿಮಾನಿಗಳ ಆಗ್ರಹವಾಗಿದೆ.
ಒಟ್ಟಾರೆಯಾಗಿ ಸುಳ್ಯದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಸತತವಾಗಿ ಸೋಲುತ್ತಾ ಬಂದಿರುವ ಕಾಂಗ್ರೆಸ್ಗೆ ಈ ಬಾರಿ ಗೆಲ್ಲುವ ಉಜ್ವಲ ಅವಕಾಶ ಇದೆ ಎನ್ನುವ ಮಾತುಗಳು ಸುಳ್ಯ ಕ್ಷೇತ್ರದಲ್ಲಿ ಕೇಳಿ ಬಂದಿದ್ದು ಅದೀಗ ಕಾಂಗ್ರೆಸ್ನೊಳಗೆ ಎದ್ದಿರುವ ಅಸಮಾಧಾನದ ಹೊಗೆಯಿಂದ ನಷ್ಟವಾಗುವ ಸಾಧ್ಯತೆ ಇದೆ ಎನ್ನುವ ಮಾತನ್ನು ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದ ಸುಳ್ಯದ ಕಾಂಗ್ರೆಸಿಗರು ಹೇಳುತ್ತಿದ್ದಾರೆ.

ಈತನ್ಮಧ್ಯೆ ಕಾಂಗ್ರೆಸ್ ನೊಳಗಿನ ಆಂತರಿಕ ಅಸಮಾಧಾನದ ಲಾಭ ಬಿಜೆಪಿಗೆ ಆಗಲಿದೆ ಎನ್ನುವ ಲೆಕ್ಕಾಚಾರವೂ ಜೋರಾಗಿ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!