ಪುತ್ತೂರು: ರಸ್ತೆ, ಇನ್ನಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ತಾಲೂಕು ಆಡಳಿತ ಸೌಧದ ಎದುರು ಮೌನ ಧರಣಿ.
ಪುತ್ತೂರು:ರಸ್ತೆ ಸಹಿತ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ತಾಲೂಕು ಆಡಳಿತ ಸೌಧದ ಎದುರು ಸೋಮವಾರ ಮೌನ ಧರಣಿ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ವೇದಿಕೆಯ ರಾಜ್ಯಾಧ್ಯಕ್ಷ ಸುಂದರ ಪಾಟಾಜೆ ಮಾತನಾಡಿ, ಕುದ್ಕೋಳಿಯಲ್ಲಿ ಸುಮಾರು 27 ಸೆಂಟ್ಸ್ ಸರ್ಕಾರಿ ಜಾಗವನ್ನು ಅಕ್ರಮ ಸಕ್ರಮ ಯೋಜನೆಯಡಿ ಜಯಲತಾ ರೈ ಎಂಬವರಿಗೆ ಮಂಜೂರುಗೊಳಿಸಲಾಗಿದ್ದು, ಈ ಜಾಗದಲ್ಲಿ ದಲಿತ ಕುಟುಂಬಕ್ಕೆ ಸೇರಿದ ಪರಮೇಶ್ವರ ಮತ್ತು ಇತರ ನಾಲ್ಕು ಕುಟುಂಬಗಳಿಗೆ ಮನೆಗೆ ಹೋಗಬೇಕಾಗಿದೆ. ಇದೀಗ ಜಯಲತಾ ರೈ ಅವರು ಈ ರಸ್ತೆಯನ್ನು ಮುಚ್ಚಲು ಮುಂದಾಗಿದ್ದಾರೆ. ಅಲ್ಲದೆ ಸರ್ಕಾರಿ ಜಾಗದಲ್ಲಿ ಅವರು ಮನೆ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ದೂರು ನೀಡಿದ್ದರೂ. ಈ ತನಕ ಕ್ರಮ ಕೈಗೊಂಡಿಲ್ಲ. ಆದ್ದರಿಂದ ದಲಿತ ಕುಟುಂಬಗಳಿಗೆ ಮನೆಗೆ ತೆರಳಲು ಬಳಸುತ್ತಿರುವ ರಸ್ತೆಯನ್ನು ದಲಿತ ಕುಟುಂಬಗಳಿಗೆ ಬಿಟ್ಟು ಕೊಡಬೇಕು, ಅಕ್ರಮವಾಗಿ ಮಾಡಿದ ಅಕ್ರಮ ಸಕ್ರಮ ಮಂಜೂರಾತಿಯನ್ನು ರದ್ದುಪಡಿಸಬೇಕು ಮತ್ತು ಜಯಲತಾ ರೈ ಅವರು ದಲಿತರಾದ ಪರಮೇಶ್ವರ ಎಂಬವರ ಅಡಿಕೆ ಕೃಷಿಗೆ ಹಾನಿ ಮಾಡಿದ್ದು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು, ಈ ಜಾಗವನ್ನು ಅಳತೆ ಮಾಡಿ ದಲಿತರಿಗೆ ಅನ್ಯಾಯ ಎಸಗಿರುವ ಸರ್ವೇ ಅಧಿಕಾರಿಗಯವರ ಮೇಲೆಯೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪರಮೇಶ್ವರ ಕೆಮ್ಮಿಂಜೆ, ಸದಸ್ಯರಾದ ಶೀನಪ್ಪ, ಕೃಷ್ಣಪ್ಪ, ಸೇಸಪ್ಪ, ತನಿಯಪ್ಪ, ರಾಮು, ಅನುರಾಧ, ಲಲಿತ, ಸುನಂದ, ರತ್ನಾ ಮತ್ತಿತರರು ಪಾಲ್ಗೊಂಡಿದ್ದರು. ಬಳಿಕ ಸಹಾಯಕ ಆಯುಕ್ತರಿಗೆ, ತಹಸೀಲ್ದಾರ್ ಅವರಿಗೆ ಬೇಡಿಕೆ ಕುರಿತು ಮನವಿ ನೀಡಲಾಯಿತು.