ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು
ಶಿವಮೊಗ್ಗ: ಪ್ರಕರಣವೊಂದರ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಆತ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದ್ದು, ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಅಸ್ಲಂ ಎಂಬಾತನ ಎಡಗಾಲಿಗೆ ಗುಂಡು ಹಾರಿಸಲಾಗಿದೆ. ಪುರಲೆ ರಸ್ತೆಯಲ್ಲಿ ನಿರ್ಮಾಣವಾಗಿರುವ ಬಡಾವಣೆಯೊಂದರಲ್ಲಿ ಅಸ್ಲಂ ಅವಿತುಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಠಾಣೆ ಪೊಲೀಸರು ಆತನ ಬಂಧನಕ್ಕೆ ತೆರಳಿದ್ದರು.
ದೊಡ್ಡಪೇಟೆ ಠಾಣೆ ಪಿಎಸ್ಐ ವಸಂತ್ ಅವರ ನೇತೃತ್ವದ ತಂಡ ಅಸ್ಲಂ ಬಂಧನಕ್ಕೆ ತೆರಳಿತ್ತು. ಈ ಸಂದರ್ಭ ಅಸ್ಲಂ, ಪೊಲೀಸ್ ಸಿಬ್ಬಂದಿ ರಮೇಶ್ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ರಮೇಶ್ ಅವರು ಗಾಯಗೊಂಡಿದ್ದಾರೆ.
ಪರಾರಿಯಾಗಲು ಯತ್ನಿಸಿದ ಅಸ್ಲಂಗೆ ಪಿಎಸ್ಐ ವಸಂತ್ ಅವರು ಎಚ್ಚರಿಕೆ ನೀಡಿ, ಬಳಿಕ ಗುಂಡು ಹಾರಿಸಿದ್ದಾರೆ. ಅಸ್ಲಂನ ಎಡಗಾಲಿಗೆ ಗುಂಡು ತಾಗಿದ್ದು, ಆತ ಗಾಯಗೊಂಡಿದ್ದಾನೆ.
ಪೊಲೀಸ್ ಸಿಬ್ಬಂದಿ ರಮೇಶ್ ಮತ್ತು ಆರೋಪಿ ಅಸ್ಲಂನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಅಸ್ಲಂ ಅಪರಾಧ ಹಿನ್ನೆಲೆ ಇದೆ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.