ಅಕ್ರಮ ಹಣ ಪರಿಚಲನೆ ದಂಧೆ ಜಾಲ ಪತ್ತೆ: ಕಡಬದಲ್ಲಿ ‘KINGS Bazaar’ ವಿರುದ್ಧ ಪೊಲೀಸ್ ದಾಳಿ, 7 ಮಂದಿಯ ವಿರುದ್ಧ ಎಫ್ಐಆರ್
ಕಡಬ: ಸಾರ್ವಜನಿಕರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ, ಕಡಿಮೆ ದರದಲ್ಲಿ ಬೆಲೆಬಾಳುವ ವಸ್ತುಗಳು ಹಾಗೂ ಆನ್ಲೈನ್ ಕಮಿಷನ್ ನೀಡುವ ಆಮಿಷ ಒಡ್ಡಿ ನಿಷೇಧಿತ ‘ಮನಿ ಸರ್ಕ್ಯುಲೇಶನ್’ (ಹಣ ಪರಿಚಲನೆ) ಯೋಜನೆಯನ್ನು ನಡೆಸುತ್ತಿದ್ದ ಜಾಲವೊಂದನ್ನು ಕಡಬ ಠಾಣೆ ಪೊಲೀಸರು ಭೇದಿಸಿದ್ದಾರೆ.
ಈ ಅಕ್ರಮ ದಂಧೆಗೆ ಸಂಬಂಧಿಸಿದಂತೆ ಹಾವೇರಿ ಮೂಲದ KINGS Bazaar ಸಂಸ್ಥೆ, ಅದರ ಮಾಲೀಕರು ಹಾಗೂ ಸ್ಥಳೀಯವಾಗಿ ಏಜೆಂಟ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದ 7 ಮಂದಿಯ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಹಾವೇರಿಯ ‘KINGS Bazaar’ ಎಂಬ ಸಂಸ್ಥೆಯ ಹೆಸರಿನಲ್ಲಿ ಸಾರ್ವಜನಿಕರನ್ನು ಒಟ್ಟುಗೂಡಿಸಿ ಅಕ್ರಮ ಯೋಜನೆ ನಡೆಸಲಾಗುತ್ತಿತ್ತು. “ನಮ್ಮ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಶೀಘ್ರವಾಗಿ ಹಣ ಗಳಿಸಬಹುದು, ದುಬಾರಿ ಬೆಲೆಯ ವಸ್ತುಗಳನ್ನು ತೀರ ಕಡಿಮೆ ಬೆಲೆಗೆ ಪಡೆಯಬಹುದು. ಅಲ್ಲದೆ, ಬೇರೆ ಜನರನ್ನು ಈ ಯೋಜನೆಗೆ ಸೇರ್ಪಡೆಗೊಳಿಸಿದರೆ ಭಾರಿ ಪ್ರಮಾಣದ ಕಮಿಷನ್ ನೀಡಲಾಗುವುದು” ಎಂದು ಆಮಿಷ ಒಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗುತ್ತಿತ್ತು.
ಸಾರ್ವಜನಿಕರನ್ನು ವಂಚಿಸುವ ನಿಷೇಧಿತ ಹಣ ಪರಿಚಲನೆ ಯೋಜನೆ ಇದಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕೃತ್ಯವನ್ನು ತಡೆದು ತನಿಖೆ ಆರಂಭಿಸಿದ್ದಾರೆ.
ಆರೋಪಿಗಳ ವಿವರ
ಈ ಯೋಜನೆಯನ್ನು ಸ್ಥಳೀಯವಾಗಿ ನಡೆಸುತ್ತಿದ್ದ ಕೆಳಗಿನ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ:
ಸುಬ್ರಹ್ಮಣ್ಯ ಶಗ್ರಿತ್ತಾಯ (50) – ಕೊಕ್ಕಡ, ಬೆಳ್ತಂಗಡಿ
ಗುರುಮೂರ್ತಿ (54) – ಕೊಕ್ಕಡ, ಬೆಳ್ತಂಗಡಿ
ಸುರೇಶ್ ಆರ್. ಎಸ್. (55) – ಬಿಳಿನೆಲೆ, ಕಡಬ
ಕಿರಣ ಕುಮಾರ್ (21) – ಬಿಳಿನೆಲೆ, ಕಡಬ
ಶ್ರೀನಾಥ್ (48) – ಬಿಳಿನೆಲೆ, ಕಡಬ
ಬಾಲಕೃಷ್ಣ ಪಿ. ಹೆಚ್. (42) – ಕೌಕ್ರಾಡಿ, ಕಡಬ
ಸಂದೇಶ್ – ಪುತ್ತೂರು, ಹಾಗೂ KINGS Bazaar ಸಂಸ್ಥೆ ಮತ್ತು ಅದರ ಮಾಲೀಕರು.
ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ ಅ.ಕ್ರ: 100/2026 ರಂತೆ, ನಿಷೇಧಿತ ಹಣ ಪರಿಚಲನೆ ತಡೆ ಕಾಯ್ದೆ (Section 4, 5, 6 PRIZE CHIT & MONEY CIR. SCHEMES (BANNING) ACT, 1978) ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವ ಮುಂದಿನ ತನಿಖೆ ಕೈಗೊಂಡಿದ್ದಾರೆ.



