ಪುತ್ತೂರು: ಯುವತಿಯ ಹಿಂಬಾಲಿಸಿದ ಪ್ರಕರಣಕ್ಕೆ ತಿರುವು
ಪುತ್ತೂರು: ಯುವತಿಯೊಬ್ಬಳಿಗೆ ಚಾಕು ತೋರಿಸಿ ಹಿಂಬಾಲಿಸಿದ ಆರೋಪ ಹಾಗೂ ಆ ಆರೋಪವನ್ನು ನಿರಾಕರಿಸಿ ಯುವಕರು ನೀಡಿದ ಮರುದೂರಿಗೆ ಸಂಬಂಧಿಸಿದಂತೆ ಪುತ್ತೂರಿನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಜುಲೈ 8ರಂದು ಬೆಳಿಗ್ಗೆ ಯುವತಿಯೊಬ್ಬಳು ಕೆಲಸಕ್ಕೆ ಹೋಗುತ್ತಿದ್ದಾಗ, ಕಾಲೇಜಿನಲ್ಲಿ ತನ್ನೊಂದಿಗೆ ಓದುತ್ತಿದ್ದ ಸೊಹೈಲ್ ಎಂಬಾತ ಚಾಕು ಹಿಡಿದುಕೊಂಡು ನಿಂತಿರುವುದನ್ನು ಗಮನಿಸಿದ್ದಾಳೆ. ಆತ ತನ್ನ ಇತರ ನಾಲ್ಕು ಸ್ನೇಹಿತರೊಂದಿಗೆ ವಾಹನದಲ್ಲಿ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದು ಭಯಗೊಂಡ ಯುವತಿ, ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಯುವಕರ ಮರುದೂರು ಮತ್ತು ಸ್ಪಷ್ಟನೆ:
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಯುವಕರನ್ನು ವಿಚಾರಣೆ ನಡೆಸಿದಾಗ ಪ್ರಕರಣಕ್ಕೆ ಬೇರೆಯದೇ ತಿರುವು ಸಿಕ್ಕಿದೆ. “ತಾವು ಬೇಕರಿಯಲ್ಲಿ ಬ್ರೆಡ್ಗೆ ಚೀಸ್ ಹಚ್ಚಲು ಚಾಕು ಪಡೆದಿದ್ದಾಗಿಯೂ, ಅದನ್ನು ಮರಳಿ ನೀಡಲು ಹೋಗುತ್ತಿದ್ದಾಗ ಯುವತಿ ತಪ್ಪು ಗ್ರಹಿಸಿದ್ದಾಳೆ. ತಮಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ” ಎಂದು ಯುವಕರು ಸ್ಪಷ್ಟನೆ ನೀಡಿದ್ದಾರೆ.
ಮುಂದುವರಿದು, “ಈ ನೈಜ ಸಂಗತಿ ತಿಳಿದಿದ್ದರೂ ಸಹ, ಧಾರ್ಮಿಕ ದ್ವೇಷದ ಹಿನ್ನೆಲೆಯಲ್ಲಿ ಮುರಳಿ ಕೃಷ್ಣ ಹಂಸತಡ್ಕ ಹಾಗೂ ಇತರರು ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ಯುವತಿಯ ಮೂಲಕ ಸುಳ್ಳು ಪ್ರಕರಣ ದಾಖಲಿಸಲು ಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿ ಯುವಕರು ಪುತ್ತೂರು ನಗರ ಠಾಣೆಯಲ್ಲಿ ಮರುದೂರು ದಾಖಲಿಸಿದ್ದಾರೆ.
ಪೊಲೀಸ್ ಇಲಾಖೆ ಎಚ್ಚರಿಕೆ:
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಇಲಾಖೆ, “ಎರಡೂ ದೂರುಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಸಾರ್ವಜನಿಕರು ಈ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹರಡಬಾರದು. ಸುಳ್ಳು ಸುದ್ದಿ ಪ್ರಸಾರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಲಾಗುವುದು” ಎಂದು ಎಚ್ಚರಿಸಿದೆ.




