ಪತ್ನಿಯನ್ನು ಹತ್ಯೆಗೈದು ಪತಿಯೂ ಆತ್ಮಹತ್ಯೆಗೆ ಯತ್ನ
ಪುತ್ತೂರು: ಪತಿಯೊಬ್ಬ ತನ್ನ ಪತ್ನಿಯನ್ನೇ ಚೂರಿಯಿಂದ ಇರಿದು ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಅರಿಯಡ್ಕ ಗ್ರಾಮದ ಗೋಳ್ತಿಲ ಎಂಬಲ್ಲಿ ಮಾ.20ರಂದು ಬೆಳಿಗ್ಗೆ ನಡೆದಿದ್ದು
ಮೃತ ದುರ್ದೈವಿಯನ್ನು ಕಡಬ ಮೂಲದ ಸಾವಿತ್ರಿ (42) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ.
ಸಾವಿತ್ರಿ ಅವರು ಅರಿಯಡ್ಕ ಗ್ರಾಮದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಾ ವಾಸವಿದ್ದರು. ಕಳೆದ ಕೆಲವು ಸಮಯದಿಂದ ಪತಿ ಬೈರಪ್ಪ ಮತ್ತು ಸಾವಿತ್ರಿ ಅವರ ನಡುವೆ ವೈವಾಹಿಕ ವಿಷಯಕ್ಕೆ ಸಂಬಂಧಿಸಿದಂತೆ ತೀವ್ರ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.
ಮಾ.20ರ ಬೆಳಿಗ್ಗೆ, ರಬ್ಬರ್ ತೋಟದ ಮಣ್ಣಿನ ರಸ್ತೆಯಲ್ಲಿ ಸಾವಿತ್ರಿ ಅವರು ಹೋಗುತ್ತಿದ್ದ ವೇಳೆ ಆರೋಪಿ ಬೈರಪ್ಪ ಚೂರಿಯಿಂದ ಮರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಸಾವಿತ್ರಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಬೈರಪ್ಪ ತನ್ನ ಕುತ್ತಿಗೆಯನ್ನು ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಮೃತರ ತಂದೆ ತಿಪ್ಪ (75) ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.





