ಅರುಣ್ ಪುತ್ತಿಲ ವಿರುದ್ದ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ ನೀಡಿದ ನ್ಯಾಯಾಲಯ
ಪುತ್ತೂರು: ಅರುಣ್ ಪುತ್ತಿಲ ವಿರುದ್ದ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯ ಪ್ರತಿಬಂಧಕಾಜ್ಞೆ ಹೊರಡಿಸಿದೆ.

ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಕೋರಿ, ಬಿಜೆಪಿ ಮುಖಂಡರೂ ಆಗಿರುವ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದ್ದು, ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಪ್ರತಿಬಂಧಕಾಜ್ಞೆ ಹೊರಡಿಸಿದೆ.

ಅವರ ಮಾನಹಾನಿ ಆಗುವಂತಹ ಯಾವುದೇ ಸುದ್ದಿ ಅಥವಾ ವರದಿಗಳನ್ನು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಪ್ರಕಟಿಸುವುದಾಗಲೀ ಅಥವಾ ಬಿತ್ತರಿಸುವುದಾಗಲೀ ಮಾಡಬಾರದು’ ಎಂದು ಬೆಂಗಳೂರಿನ ಸಿಟಿ ಮತ್ತು ಸಿವಿಲ್ ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ಆದೇಶ ನೀಡಿದೆ.

ಅರುಣ್ ಪುತ್ತಿಲರು ಸಲ್ಲಿಸಿರುವ ಅಸಲು ದಾವೆಯ ಭಾಗವಾಗಿ ಸಲ್ಲಿಸಲಾಗಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ನಗರದ 7ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾದೀಶರು ಗುರುವಾರ ಪ್ರತಿಬಂಧಕಾಜ್ಞೆ ಹೊರಡಿಸಿದ್ದಾರೆ.