ಈಶ್ವರಮಂಗಲದಲ್ಲಿ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರ ಸಂಘದ ಶಾಖೆ ಪ್ರಾರಂಭಿಸುವ ಕುರಿತು ಸಮಾಲೋಚನಾ ಸಭೆ
ಪುತ್ತೂರು: ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ಇದರ ಈಶ್ವರಮಂಗಲ ಶಾಖೆ ತೆರೆಯುವ ಕುರಿತು ಸಮಾಲೋಚನಾ ಸಭೆ ಈಶ್ವರಮಂಗಲ ಹಿರಾ ಟವರ್ ಸಭಾಂಗಣದಲ್ಲಿ ನಡೆಯಿತು.
![](http://newsbites.in/wp-content/uploads/2023/07/IMG_20230713_155428.jpg)
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಲ್ಪ ಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ಸುಳ್ಯ ಇದರ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ಮಾತನಾಡಿ ಅಲ್ಪ ಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘವು ಸುಳ್ಯದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಸುಮಾರು 25 ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಸಂಸ್ಥೆಯು ಉತ್ತಮ ಅಭಿವೃದ್ಧಿಯನ್ನು ಹೊಂದಿದ್ದು ಸುಮಾರು ನಾಲ್ಕು ಸಾವಿರ ಮಂದಿ ಸದಸ್ಯರನ್ನು ಹೊಂದಿದೆ, ವಾರ್ಷಿಕವಾಗಿ ಸುಮಾರು ರೂ.55 ಕೋಟಿಗಿಂತಲೂ ಹೆಚ್ಚಿನ ವ್ಯವಹಾರ ಮಾಡಿದ್ದು ಉತ್ತಮ ವ್ಯವಹಾರಕ್ಕಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಪ್ರಶಸ್ತಿ ಕೂಡಾ ಲಭಿಸಿದೆ ಎಂದು ಅವರು ಹೇಳಿದರು.
ಸುಳ್ಯ ಕೇಂದ್ರ ಕಚೇರಿಯನ್ನು ಹೊಂದಿರುವ ಸಂಘವು ಬೆಳ್ಳಾರೆಯಲ್ಲಿ ಶಾಖೆಯನ್ನು ಹೊಂದಿದೆ, ಇದೀಗ ಎರಡನೇ ಶಾಖೆಯನ್ನು ಈಶ್ವರಮಂಗಲದಲ್ಲಿ ತೆರೆಯಬೇಕೆಂಬ ಉದ್ದೇಶದಿಂದ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿದೆ, ಇಲ್ಲಿ ನಮಗೆ ಉತ್ತಮ ಸ್ಪಂದನೆ ದೊರಕಿದ್ದು ಶೀಘ್ರದಲ್ಲೇ ಶಾಖೆಯನ್ನು ತೆರಯಲಿದ್ದೇವೆ, ಮುಂದಿನ ದಿನಗಳಲ್ಲಿ ಪುತ್ತೂರು, ವಿಟ್ಲ, ಉಪ್ಪಿನಂಗಡಿ ಭಾಗಗಳಲ್ಲೂ ಈ ಸಹಕಾರಿ ಸಂಘದ ಶಾಖೆಗಳನ್ನು ತೆರೆಯುವ ಮೂಲಕ ಅಲ್ಪ ಸಂಖ್ಯಾತ ಸಮುದಾಯದ ಆರ್ಥಿಕ ಕಾರ್ಯಗಳಿಗೆ ಶಕ್ತಿ ತುಂಬುವ ಕಾರ್ಯವನ್ನು ಮಾಡಲಿದ್ದೇವೆ ಎಂದು ಮಹಮ್ಮದ್ ಇಕ್ಬಾಲ್ ಎಲಿಮಲೆ ಹೇಳಿದರು.
![](http://newsbites.in/wp-content/uploads/2023/07/IMG_20230713_160043-1024x250.jpg)
ಸಂಘದ ನಿರ್ದೇಶಕ ಸಂಶುದ್ದೀನ್ ಎಸ್ ಅರಂಬೂರು ಮಾತನಾಡಿ ಸಂಘವು ಈಗಾಗಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ವಿಶ್ವಾಸಾರ್ಹ ಸಹಕಾರಿ ಸಂಘವಾಗಿ ಗುರುತಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಡೆಗಳಲ್ಲಿ ಇದರ ಶಾಖೆಯನ್ನು ತೆರೆಯುವ ಮೂಲಕ ಸಂಘವನ್ನು ಜಿಲ್ಲೆಯಾದ್ಯಂತ ವಿಸ್ತರಿಸುವ ಯೋಜನೆ ನಮ್ಮದಾಗಿದೆ ಎಂದು ಹೇಳಿದರು.
![](http://newsbites.in/wp-content/uploads/2023/07/IMG_20230713_160014-1024x272.jpg)
ಕಾವು ಬುಶ್ರಾ ವಿದ್ಯಾ ಸಂಸ್ಥೆಯ ಸಂಚಾಲಕ ಬುಶ್ರಾ ಅಬ್ದುಲ್ ಅಝೀಝ್, ಹಿರಾ ಕಾಂಪ್ಲೆಕ್ಸ್ ಮಾಲಕ ಅಬ್ದುಲ್ ಖಾದರ್ ಹಾಜಿ ಹಿರಾ, ಮಧುರಾ ಇಂಟರ್ನ್ಯಾಶನಲ್ ಸ್ಕೂಲ್ನ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ನೆ.ಮುಡ್ನೂರು ಗ್ರಾ.ಪಂ ಮಾಜಿ ಸದಸ್ಯ ಖಾದರ್ ಕರ್ನೂರು ಮೊದಲಾದವರು ಮಾತನಾಡಿ ಈಶ್ವರಮಂಗಲದಲ್ಲಿ ಸಹಕಾರಿ ಸಂಘದ ಶಾಖೆ ತೆರೆಯುವುದಕ್ಕೆ ನಮ್ಮ ಬೆಂಬಲ ಮತ್ತು ಸಹಕಾರ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಮುಹಿಯುದ್ದೀನ್ ಹಾಜಿ ಕೆ.ಎಂ ನಾವೂರು, ನಿರ್ದೇಶಕರಾದ ಹಸೈನಾರ್ ಎ.ಕೆ ಕಲ್ಲುಗುಂಡಿ, ಜಾರ್ಜ್ ಡಿಸೋಜಾ ಕನಿಕರಪಳ್ಳ, ಇಸ್ಮಾಯಿಲ್ ಕೆ.ಎಂ ಪಡ್ಪಿನಂಗಡಿ, ಆಮಿನಾ ಎಸ್ ಜಯನಗರ, ಜೂಲಿಯಾ ಕ್ರಾಸ್ತ ಬೀರಮಂಗಲ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ನಾಯಕ್ ಉಪಸ್ಥಿತರಿದ್ದರು.