ಹೆಚ್ಚುತ್ತಿರುವ ಬೀದಿ ನಾಯಿಗಳ ಕಾಟ: ಸಂಬಂಧಪಟ್ಟ ಇಲಾಖೆಗಳು ಸ್ಪಂದಿಸುವಂತೆ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮನವಿ
ಸುಳ್ಯ ನಗರದಾದ್ಯಂತ ಬೀದಿ ನಾಯಿಗಳ ಕಾಟ ಇತ್ತೀಚಿಗೆ ಹೆಚ್ಚಾಗಿದ್ದು ಸಂಬಂಧಪಟ್ಟ ಇಲಾಖೆಗಳು ಸ್ಪಂದಿಸುವಂತೆ ಮನವಿ ನೀಡಲಾಗಿದೆ.

ಶಾಂತಿನಗರ, ಪೈಚಾರ್, ಬೆಟ್ಟಂಪಾಡಿ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೇಳತೀರದ ಮಟ್ಟಿಗೆ ಬಂದಿದೆ.
ಶಾಲೆಗೆ ಅಥವಾ ಬೆಳಿಗ್ಗೆ ಮದ್ರಸಕ್ಕೆ ಹೋಗುವ ಮಕ್ಕಳು ತಿರುಗಿ ಮನೆಗೆ ಬರುತ್ತಾರೋ ಅಥವಾ ಆಸ್ಪತ್ರೆ ಸೇರುತ್ತಾರೋ ಎಂಬ ಭಯದಿಂದ ಹೆತ್ತವರು ಭಯ ಭೀತರಾಗಿದ್ದಾರೆ.
ನಾಯಿಗಳ ಕಾಟದಿಂದ ಜನರಿಗೆ ಬೆಳಿಗ್ಗೆ ಎದ್ದು ತಮ್ಮ ತಮ್ಮ ಕೆಲಸಕ್ಕೆ ಹೋಗಲು ಕಷ್ಟಕರವಾಗಿದೆ. ವಯೋವೃದ್ಧರು ಕೂಡ ಇದರಿಂದ ತೊಂದರೆ ಪಡುತ್ತಿದ್ದಾರೆ. ಚಿಕ್ಕ ಪುಟ್ಟ ಮಕ್ಕಳು ಆಟವಾಡಲು ಭಯಪಡುವಷ್ಟು ಆತಂಕ ಎದುರಾಗಿದೆ. ಒಂದೊಂದು ಮನೆಗಳಲ್ಲಿ ಸುಮಾರು 10, 12 ನಾಯಿಗಳು ಯಾವುದೇ ಗೂಡಿನ ವ್ಯವಸ್ಥೆ ಇಲ್ಲದೆ ಸಾಕುತ್ತಿದ್ದಾರೆ. ಆದ್ದರಿಂದ ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಕಲ್ಯಾಣ ಇಲಾಖೆ ಮತ್ತು ಜಿಲ್ಲಾಡಳಿತ, ನಗರ ಪಂಚಾಯತ್ ,ಗ್ರಾಮ ಪಂಚಾಯತ್ ಗಳು ಈ ಬಗ್ಗೆ ಕೂಡಲೇ ಸ್ಪಂದಿಸಿ ಕ್ರಮ ಕೈಗೊಳ್ಳುವಂತೆ ಪೈಚಾರು ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಧ್ಯಕ್ಷ ಆರ್ಬಿ ಬಶೀರ್ ವಿವಿಧ ಇಲಾಖೆಗಳಿಗೆ ಮನವಿ ನೀಡಿದ್ದಾರೆ.