ಪುತ್ತೂರು: ಹಿಂದೂ ಸಂಘಟನೆ ಮುಖಂಡ, ಆರ್ಯಾಪು ಗ್ರಾ.ಪಂ ಮಾಜಿ ಸದಸ್ಯ ಕಾಂಗ್ರೆಸ್ ಸೇರ್ಪಡೆ
ಪುತ್ತೂರು: ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ, ಆರ್ಯಾಪು ಗ್ರಾಪಂ ಮಾಜಿ ಸದಸ್ಯರೂ ಆಗಿದ್ದ ರಮೇಶ್ ರೈ ಡಿಂಬ್ರಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಜೂ.3ರಂದು ಪುರಭವನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕು ಘಟಕದ ಸಂಚಾಲಕರಾಗಿ, ಅಧ್ಯಕ್ಷರಾಗಿ 12 ವರ್ಷ ಕಾರ್ಯ ನಿರ್ವಹಿಸಿದ್ದ ರಮೇಶ್ ರೈ ಅವರು ಬಳಿಕ ಆರ್ಯಾಪು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯರಾಗಿ ಚುನಾಯಿತರಾಗಿದ್ದರು. ಮೂಲತಃ ಕೋಡಿಂಬಾಡಿ ಗ್ರಾಮದ ಪಿಜಿನಡ್ಕಗುತ್ತು ನಿವಾಸಿಯಾಗಿರುವ ರಮೇಶ್ ರೈ ಪ್ರಸ್ತುತ ಆರ್ಯಾಪು ಗ್ರಾಮದ ಡಿಂಬ್ರಿ ನಿವಾಸಿಯಾಗಿದ್ದಾರೆ. ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಪುತ್ತೂರು ಯುವ ಬಂಟರ ಸಂಘದ ಉಪಾಧ್ಯಕ್ಷರಾಗಿ, ಕೋಶಾಧಿಕಾರಿಯಾಗಿ, ಅಧ್ಯಕ್ಷರಾಗಿ, ಬಂಟರ ಸಂಘದ ನಿರ್ದೇಶಕರಾಗಿ, ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ರಮೇಶ್ ರೈ ಪ್ರಸ್ತುತ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.