ಸುಳ್ಯ: ರಸ್ತೆ ನಿರ್ಮಿಸುವ ಸಂದರ್ಭ ಸ್ಥಳೀಯ ದಲಿತ ಕುಟುಂಬಗಳಿಗೆ ಅನ್ಯಾಯ ಆರೋಪ, ನ್ಯಾಯ ಒದಗಿಸಿಕೊಡುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಗೆ ದೂರು-ಮನವಿಗೆ ಸ್ಪಂದಿಸಿದ ಇಲಾಖಾಧಿಕಾರಿಗಳು
ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಸೋಣಗೇರಿ ಸಮೀಪ ಕುಂಟಿಕಾನ ಎಂಬಲ್ಲಿ ಸುಮಾರು ನಾಲ್ಕು ದಲಿತ ಕುಟುಂಬಗಳ ನಿವೇಶನಗಳಿದ್ದು ಈ ಭಾಗದ ಮುಖ್ಯರಸ್ತೆ ಕಾಮಗಾರಿ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಮಣ್ಣು ತೆರವು ಮಾಡಿ ದಲಿತ ಕುಟುಂಬದವರಿಗೆ ತೊಂದರೆ ನೀಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

ಸಂಘಟನೆಗೆ ದೂರು ಬಂದ ಹಿನ್ನೆಲೆಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಕಾಮಗಾರಿಯ ಇಂಜಿನಿಯರಿಗೆ ಕರೆ ಮಾಡಿ ದಲಿತ ಸಮುದಾಯದ ಜನತೆಗೆ ತೊಂದರೆಯಾಗಿರುವ ಮತ್ತು ಅಡಿಕೆ ಗಿಡ ನಾಶ ಮಾಡಿರುವ ಬಗ್ಗೆ ವಿವರವನ್ನು ನೀಡಿದ್ದು ಪರಿಹಾರವನ್ನು ಮಾಡಿಕೊಡಬೇಕು ಮತ್ತು ಅವರಿಗೆ ಓಡಾಡಲು ರಸ್ತೆಯ ವ್ಯವಸ್ಥೆ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದು ಅದಕ್ಕೆ ಸ್ಪಂದಿಸಿದ ಇಂಜಿನಿಯರ್ ನಾಳೆ ನಾನು ಸ್ಥಳಕ್ಕೆ ಬರುತ್ತೇನೆ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಅಲ್ಲದೆ ರಸ್ತೆಯ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸೋಣಗೇರಿಯಿದ ಬೆಳ್ಳಾರೆಗೆ ಹೋಗುವ ರಸ್ತೆ ಕುಂಟಿಕಾನ ಎಂಬಲ್ಲಿ ರಸ್ತೆ ವಿಸ್ತೀರ್ಣ ಕಾಮಗಾರಿಯ ಸಂದರ್ಭದಲ್ಲಿ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಸಮಾನವಾಗಿ ಮಧ್ಯದಿಂದ 7=50 ಮೀಟರ್ ವಿಸ್ತೀರ್ಣಕ್ಕೆ ಮಣ್ಣು ತೆರವುಗೊಳಿಸುವ ಬಗ್ಗೆ ಸ್ಥಳೀಯ ನಿವಾಸಿಗಳಿಗೆ ಸಂಬಂಧಪಟ್ಟವರು ಮಾತು ನೀಡಿದ್ದರು ಎನ್ನಲಾಗಿದೆ.
ಆದರೆ ಇದೀಗ ರಸ್ತೆಯ ಒಂದೇ ಬದಿಯಿಂದ ಮಣ್ಣು ತೆರವುಗೊಳಿಸಿದ್ದು ಇದರಿಂದ ನಮ್ಮ ಮನೆಗೆ ರಸ್ತೆ ಇಲ್ಲದಂತಾಗಿದೆ.ಅಲ್ಲದೆ ಹತ್ತಕ್ಕೂ ಹೆಚ್ಚು ಅಡಿಕೆ ಗಿಡವನ್ನು ನಾಶ ಮಾಡಿದ್ದಾರೆ. ನಮ್ಮ ಜಾಗವನ್ನು ಅಳತೆ ಮಾಡಿದ್ದಕ್ಕಿಂತ ಹೆಚ್ಚಾಗಿ ತೆರವುಗೊಳಿಸಿದ್ದು ಅಡಿಕೆ ಗಿಡವನ್ನು ನಾಶ ಮಾಡಿದ್ದಾರೆ. ಆದ್ದರಿಂದ ನಮಗೆ ನ್ಯಾಯ ಕೊಡಿಸಿ ಎಂದು ದಲಿತ ಸಮುದಾಯದ ಸ್ಥಳೀಯ ನಿವಾಸಿಗಳಾದ ಆನಂದ, ಹಾಗೂ ಸರೋಜ ಕುಂಟಿಕಾನ ಎಂಬವರು ಅಂಬೇಡ್ಕರ್ ರಕ್ಷಣಾ ವೇದಿಕೆಗೆ ದೂರನ್ನು ನೀಡಿದ್ದಾರೆ.