ಕರಾವಳಿ

ಪೊಲೀಸರು ನಮ್ಮ ಜೊತೆ ಹಿಂಸಾತ್ಮಕ ರೀತಿಯಲ್ಲಿ ವರ್ತಿಸಿದರು
ಶಾಸಕರ ಮುಂದೆ ಗಾಯಾಳುಗಳ ಅಳಲು

ಪುತ್ತೂರು: ನಮ್ಮನ್ನು ಕೋಣೆಯೊಳಗೆ ಕೂಡಿ ಹಾಕಿ ಬೇಕಾಬಿಟ್ಟಿ ಥಳಿಸಿ, ಪೊಲೀಸರು ಹಿಂಸಾತ್ಮಕ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಪೊಲೀಸ್ ದೌರ್ಜನ್ಯದ ಆರೋಪದಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳು ಪುತ್ತೂರು ಶಾಸಕರಾದ ಅಶೋಕ್ ರೈಯವರಲ್ಲಿ ಅಲವತ್ತುಕೊಂಡರು.

ಡಿವೈಎಸ್ಪಿಯವರೇ ಹೆಚ್ಚು ಹೊಡೆದು ಅಮಾನವೀಯತೆಯಿಂದ ವರ್ತಿಸಿದ ಅವರು ಮುಖಮೂತಿ ನೋಡದೆ ಹಲ್ಲೆ ಮಾಡಿದ್ದಾರೆ. ಹೊಡೆದು ರಕ್ತ ಬರುತ್ತಿದ್ದರೂ ಬಿಡದೆ ಹೊಡೆದಿದ್ದಾರೆ. ಪೊಲೀಸರ ಹಲ್ಲೆಯಿಂದ ನಮ್ಮಲ್ಲಿ ಒಬ್ಬರ ಕಿವಿಗೆ ಹಾನಿಯಾಗಿದ್ದು ಕಿವಿ ಕಿವುಡಾಗಿದೆ ಎಂದು ಶಾಸಕರ ಬಳಿ ನೋವು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ದೌರ್ಜನ್ಯ ನಡೆಸಿದ ಇಬ್ಬರನ್ನು ಅಮಾನತು ಮಾಡಲಾಗಿದೆ, ಒಬ್ಬರನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಘಟನೆ ಗೊತ್ತಾದ ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಕೂಡಲೇ ಆಂತರಿಕ ತನಿಖೆ ನಡೆಸಿ ವರದಿ ಪಡೆದುಕೊಂಡಿದ್ದೆ. ದೌರ್ಜನ್ಯ ನಡೆದಿದೆ ಎಂದು ತಿಳಿದಾಕ್ಷಣ ಗ್ರಾಮಾಂತರ ಪಿಎಸ್‌ಐ ಮತ್ತು ಗ್ರಾಮಾಂತರ ಠಾಣೆಯ ಪಿಸಿಯವರ ಮೇಲೆ ಎಫ್‌ಐಆರ್ ದಾಖಲಿಸಿ ಇಬ್ಬರನ್ನೂ ಅಮಾನತು ಮಾಡಿಸಿದ್ದೇನೆ. ಎಡಿಜಿಪಿ ಅಲೋಕ್ ಕುಮಾರ್ ಜೊತೆ ಮಾತುಕತೆ ನಡೆಸಿ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ತಿಳಿಸಿದ್ದೇನೆ ಎಂದು ಹೇಳಿದರು.

ಒತ್ತಡ ಹಾಕುವ ಮೂಲಕ ನಿಮ್ಮ ಮೇಲೆ ದೌರ್ಜನ್ಯ ನಡೆದಿದೆ. ಯಾರು ಒತ್ತಡ ಹಾಕಿದವರೆಂದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಎಂದೂ ಇಂಥಹ ಕೃತ್ಯವನ್ನು ಮಾಡಿಸಿಲ್ಲ, ಮಾಡಿಸುವುದೂ ಇಲ್ಲ ಇದರಲ್ಲಿ ನಮ್ಮ ಪಾತ್ರವೇನು ಇಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಂ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!