ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಹರಿಹಾಯ್ದ ಡಾ.ಎಂ.ಕೆ ಪ್ರಸಾದ್
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಅವರು ಹಿಂದೆ ಬಿಜೆಪಿ ಗೆ ಮತವನ್ನೇ ಹಾಕಿಲ್ಲ. ಅಲ್ಲದೇ ಪುತ್ತೂರು ಬಿಜೆಪಿಯ ಕಛೇರಿಗೇ ಬಾರದೇ, ಬಿಜೆಪಿಯ ಮುಖಂಡರನ್ನು ಸಂಪರ್ಕಿಸದೇ ತನಗೆ ಶಾಸಕ ಸ್ಥಾನದ ಟಿಕೆಟ್ ನೀಡಬೇಕೆಂದು ಆಗ್ರಹಿಸುವುದು ಹಾಸ್ಯಾಸ್ಪದ ಎಂದು ಪತ್ರಿಕಾಗೋಷ್ಠಿಯಲ್ಲಿ ಡಾ.ಎಂ.ಕೆ. ಪ್ರಸಾದ್ ಹೇಳಿದರು.

ಚುನಾವಣೆ ಬರುವಾಗ ಪುತ್ತಿಲರಿಗೆ ಅಧಿಕಾರದ ಆಸೆ ಆಗುತ್ತದೆ. ನಮಗೆ ಶೋ ಮಾಡುವವರು ಬೇಡ. ಶಾಂತ ಸ್ವಭಾವದ ಶಾಸಕರು ಬೇಕು ಎಂದು ಅವರು ಹೇಳಿದರು.
ಅರುಣ್ ಕುಮಾರ್ ಪುತ್ತಿಲರಿಗೆ ಹಿಂದು ಮುಖಂಡ ಆಗಬೇಕಾದರೆ ಎಂಎಲ್ಎ ಅಗಲೇಬೇಕಾ ಎಂದು ಪ್ರಶ್ನಿಸಿದ ಡಾ.ಪ್ರಸಾದ್ ಅವರು ಅರುಣ್ ಕುಮಾರ್ ಪುತ್ತಿಲ ನೂರಕ್ಕೆ ನೂರು ಗೆಲ್ಲುವುದಿಲ್ಲ. ಅವರ ಸ್ಪರ್ಧೆಯಿಂದ ಬಿಜೆಪಿಗೆ ಡ್ಯಾಮೇಜ್ ಆಗಬಹುದು ಎಂದು ಹೇಳಿದರು.
ಪುತ್ತಿಲ ಅವರ ದೇವಸ್ಥಾನಗಳ ವ್ಯವಹಾರ ಸೇರಿದಂತೆ ಅನೇಕ ವಿಚಾರಗಳ ಕುರಿತು ಮಾತನಾಡಿದ ಡಾಕ್ಟರ್ ಪ್ರಸಾದ್ ಅವರು ನನ್ನ ಜೊತೆಯಿದ್ದ ನನ್ನ ಶಿಷ್ಯ ಪುತ್ತಿಲ ಅವರ ವ್ಯವಹಾರ ಸರಿ ಇಲ್ಲ ಎನ್ನುವ ಕಾರಣಕ್ಕೆ ನಾನು ಬಿಟ್ಟಿದ್ದೇನೆ ಎಂದು ಹೇಳಿದರು.
ಓರ್ವ ವ್ಯಕ್ತಿ ಶಾಸಕನಾಗಬೇಕಾದರೆ ಆತ ಶಾಂತ ಸ್ವಭಾವವನ್ನು ಹೊಂದಿರಬೇಕು. ಸಾರ್ವಜನಿಕರ ಕಷ್ಟ ಸುಖಗಳಲ್ಲಿ ಸ್ಪಂದಿಸಬೇಕು. ಪಕ್ಷದಲ್ಲಿ ಜವಾಬ್ದಾರಿಯನ್ನು ನಿರ್ವಹಿಸಿರಬೇಕು. ಪುತ್ತೂರು ಬಿಜೆಪಿಯಲ್ಲಿ ಪರಿವಾರ ಸಂಘಟನೆಯ ಹಿರಿಯರು ಸೂಚಿಸಿದಾಗಲೂ ಯಾವುದೇ ಜವಾಬ್ದಾರಿ ಅಥವಾ ಹುದ್ದೆ ಸ್ವೀಕರಿಸಲು ನಿರಾಕರಿಸಿ, ತನ್ನದೇ ಆದ ಸಂಘಟನೆ ಮಾಡಿಕೊಂಡು, ಬಿಜೆಪಿಯ ವಿರುದ್ಧವೇ ಹೋರಾಟ ಮಾಡಿಕೊಂಡಿರುವ ವ್ಯಕ್ತಿಯನ್ನು ನಾವೆಲ್ಲ ಅರ್ಥ್ಯೈಸಿಕೊಳ್ಳಬೇಕಾಗಿದೆ ಎಂದು ಡಾ. ಎಂ.ಕೆ. ಪ್ರಸಾದ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ ಬಳ್ಳಜ್ಜ, ರಾಜೇಶ್ ಬನ್ನೂರು, ಚಂದ್ರಶೇಖರ್ ರಾವ್ ಬಪ್ಪಳಿಗೆ, ಶಂಭು ಭಟ್ ಉಪಸ್ಥಿತರಿದ್ದರು.