ಕಾಣಿಯೂರು ಗುಂಪು ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್
ಯುವಕರ ತಂಡದಿಂದ ವಿನಾಕಾರಣ ಹಲ್ಲೆ: ವ್ಯಾಪಾರಿಗಳ ಆರೋಪ
ಪುತ್ತೂರು: ಬೆಡ್ಶೀಟ್ ವ್ಯಾಪಾರಿಗಳ ಮೇಲೆ ಕಾಣಿಯೂರು ಗ್ರಾಮದ ಬೆದ್ರಾಜೆ ಎಂಬಲ್ಲಿ ಅ.20 ರಂದು ನಡೆದ ಹಲ್ಲೆ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದ್ದು ವ್ಯಾಪಾರಿಗಳ ಮೇಲೆ ಕೋಮು ಆಧಾರಿತ ಗುಂಪು ಹಲ್ಲೆ ನಡೆದಿದೆ ಎನ್ನಲಾಗಿದ್ದು ಹಲ್ಲೆಗೊಳಗಾದ ಇಬ್ಬರು ವ್ಯಾಪಾರಿಗಳು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳೂರು ಅಡ್ಡೂರು ಗ್ರಾಮದ ರಮೀಝುದ್ದೀನ್ ಮತ್ತು ಆತನ ಸಂಬಂಧಿ ರಫೀಕ್ ಹಲ್ಲೆಗೊಳಗಾದವರು.

ಇವರಿಬ್ಬರು ಬೆಡ್ ಶೀಟ್ ವ್ಯಾಪಾರ ಮಾಡುತ್ತಿದ್ದು ಕಾರಿನಲ್ಲಿ ಊರಿಂದ ಊರಿಗೆ ತೆರಳಿ ವ್ಯಾಪಾರ ನಡೆಸುತ್ತಿದ್ದಾರೆ. ಅ 20 ರಂದು ಕಾಣಿಯೂರು ಸಮೀಪ ಮಹಿಳೇಯೋರ್ವರ ಮನೆಯಲ್ಲಿ ಬೆಡ್ ಶೀಟ್ ದರದಲ್ಲಿ ಚರ್ಚೆಯಾಗಿತ್ತು. ಬಳಿಕ ವ್ಯಾಪಾರ ನಡೆಯದೆ ಇವರಿಬ್ಬರು ಅಲ್ಲಿಂದ ತೆರಳಿದ್ದು ಆ ಬಳಿಕ ರಸ್ತೆ ಮಧ್ಯೆ ಪಿಕಪ್ ವಾಹನ ಇಟ್ಟು ಕಾರನ್ನು ತಡೆದು ಸುಮಾರು 20 ರಿಂದ 30 ಮಂದಿಯ ಗುಂಪು ಇವರಿಬ್ಬರ ಮೇಲೆ ಮರ ಹಾಗೂ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಬಳಿಕ ಕೆಸರಿನಲ್ಲಿ ಹಾಕಿ ಥಳಿಸಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ಇವರಿಬ್ಬರೂ ಪ್ರಜ್ಞೆ ತಪ್ಪಿದಾಗ, ಗುಂಪು ಪ್ರಕರಣವನ್ನು ಬೇರೆ ಕಡೆ ತಿರುಗಿಸಿದ್ದು ಮಹಿಳೆಯ ಮಾನಭಂಗಕ್ಕೆ ಯತ್ನಿಸಿ ತಪ್ಪಿಸಿಕೊಂಂಡು ಹೋಗುವಾಗ ಕಾರು ಪಲ್ಟಿಯಾಗಿದೆ ಎಂಬ ಕಥೆಯನ್ನು ಕಟ್ಟಲಾಗಿದೆ ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದು ಗಂಭೀರ ಗಾಯಗೊಂಡ ಇಬ್ಬರು ವ್ಯಾಪಾರಿಗಳು ಆಸ್ಪತ್ರೆಗೆ ದಾಖಲಾಗಿದ್ದು ಗುಂಪಿನ ವಿರುದ್ದ ದೂರು ನೀಡಿದ್ದಾರೆ. ಈ ನಡುವೆ ಕಾರು ಪಲ್ಟಿಯಾಗಿದೆ ಎಂಬುದು ಕಟ್ಟು ಕಥೆಯಾಗಿದ್ದು ಈ ಬಗ್ಗೆ ಪೊಲೀಸರಿಗೂ ಮನವರಿಕೆಯಾಗಿದೆ ಎನ್ನಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ನಡುವೆ ಇಬ್ಬರು ವ್ಯಾಪಾರಿಗಳ ಮೇಲೂ ಮಾನಭಂಗ ಯತ್ನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.