ನಾನೇ ನಿಲ್ಲುವೆ..ನಾನೇ ಗೆಲ್ಲುವೆ:
ಮುಂದಿನ ಬಾರಿಯೂ ಪುತ್ತೂರು ಕ್ಷೇತ್ರಕ್ಕೆ ಶಕುಂತಳಾ ಶೆಟ್ಟಿ ರೆಡಿ
ಪುತ್ತೂರು; ಮುಂಬರುವ ಚುನಾವಣೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸ್ಪರ್ದಿಸುತ್ತಾರೋ ಇಲ್ಲವೋ ಎಂಬ ಅನುಮಾನಗಳಿಗೆ ಕಬಕದಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ಪಷ್ಟ ಉತ್ತರ ನೀಡಿದ್ದು ಮುಂದಿನ ಚುನಾವಣೆಗೆ ನಾನು ಪುತ್ತೂರು ಕ್ಷೇತ್ರದಿಂದಲೇ ಸ್ಪರ್ಧಿಸುವೆ, ನಾನೇ ಗೆಲ್ಲುವೆ ಎಂದು ಕಾರ್ಯಕರ್ತರಿಗೆ ತಾನು ಸ್ಪರ್ಧಿಸುವ ಬಗ್ಗೆ ಮಾಹಿತಿ ರವಾನೆ ಮಾಡಿದ್ದಾರೆ.
ಕಬಕದಿಂದ ವಿಟ್ಲಕ್ಕೆ ತೆರಳುವ ರಸ್ತೆ ತೀರಾ ಹದಗೆಟ್ಟಿದ್ದು ಇದರ ವಿರುದ್ದ ಅ.18ರಂದು ಕಾಂಗ್ರೆಸ್ ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಇದೇ ರಸ್ತೆ ಅಭಿವೃದ್ದಿಗೆ 11 ಕೋಟಿ ಬಿಡುಗಡೆ ಮಾಡಿದ್ದೆನೆ ಎಂದು ಯಾರೋ ಬ್ಯಾನರ್ ಹಾಕಿದ್ದಾರೆ. ಅನುದಾನ ಬಿಡುಗಡೆಯಾಗಿದೆ ಎಂಬುದು ಹಸಿ ಸುಳ್ಳು. ಹಸಿ ಹಸಿ ಸುಳ್ಳು ಹೇಳಿ ಜನರನ್ನು ಮೋಸ ಮಾಡುವುದೇ ಬಿಜೆಪಿ ಕೆಲಸವಾಗಿದೆ. ಮುಂದೆ ನಾನೇ ಶಾಸಕಳಾಗಿ ಪುತ್ತೂರು ಕ್ಷೇತ್ರವನ್ನು ಅಭಿವೃದ್ದಿ ಮಾಡಿಯೇ ಮಾಡುತ್ತೇನೆ ಜನ ನನಗೆ ಆಶೀರ್ವಾದ ಮಾಡುವುದಾಗಿ ಹೇಳಿದರು.
ರಾಜ್ಯದಲ್ಲಿ ಮುಂದಿನ ಆರು ತಿಂಗಳೊಳಗಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತದೆ ಆಗ ರಾಜ್ಯದ ಜನರಿಗೆ ನೆಮ್ಮದಿಯ ಬದುಕು ಕಾಣಲಿದೆ. ಜನತೆಗೆ ಮುಂದಿನ ಆರು ತಿಂಗಳ ಬಳಿಕ ಸ್ವಚ್ಚ ಸರಕಾರ ಸಿಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡೆ ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿ ಪುತ್ತೂರು ತಾಲೂಕು ಸೇರಿದಂತೆ ಜಿಲ್ಲೆಯ ಪ್ರತೀಯೊಂದು ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು 40 % ಕಮಿಷನ್ ದಂಧೆ ಗ್ರಾಮೀಣ ಮಟ್ಟದಿಂದ ರಾಷ್ಟ್ರಮಟ್ಟದವರೆಗೂ ನಡೆಯುತ್ತಿದೆ ಎಂದು ಹೇಳಿದರು.