ಸರ್ವೆ: ಸೊರಕೆ ಪರಿಸರದಲ್ಲಿ ಬೀದಿನಾಯಿ ದಾಳಿ: ಅಂಗನವಾಡಿ ಶಿಕ್ಷಕಿ ಸಹಿತ ನಾಲ್ಕು ಮಂದಿಗೆ ಗಾಯ
ಪುತ್ತೂರು: ಸರ್ವೆ ಗ್ರಾಮದ ಸೊರಕೆ ಕರ್ಮಿನಡ್ಕ ಎಂಬಲ್ಲಿ ಬೀದಿ ನಾಯಿ ದಾಳಿಗೆ ನಾಲ್ವರು ಗಾಯಗೊಂಡ ಘಟನೆ ಡಿ.5ರಂದು ನಡೆದಿದೆ. ಬೀದಿ ನಾಯಿ ದಾಳಿಯಿಂದ ಸ್ಥಳೀಯರಲ್ಲಿ, ವಿದ್ಯಾರ್ಥಿಗಳಲ್ಲಿ ಭಯ ಆವರಿಸಿರುವುದಾಗಿ ವರದಿಯಾಗಿದೆ. ನಾಯಿ ದಾಳಿಯಿಂದ ಗಾಯಗೊಂಡವರನ್ನು ಸೊರಕೆ ಅಂಗನವಾಡಿ ಕೇಂದ್ರದ ಶಿಕ್ಷಕಿ ವಸಂತಿ, ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರು ಹಾಗೂ ಓರ್ವ ಉತ್ತರ ಕರ್ನಾಟಕದ ಮೂಲಕ ಕಾರ್ಮಿಕ ಎನ್ನಲಾಗಿದೆ.

ಸೊರಕೆ ಅಂಗನವಾಡಿ ಕೇಂದ್ರದ ಶಿಕ್ಷಕಿ ವಸಂತಿ ಅವರು ಅಂಗನವಾಡಿ ಕೇಂದ್ರಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕರ್ಮಿನಡ್ಕದಲ್ಲಿ ಹಿಂದಿನಿಂದ ಬಂದ ನಾಯಿಯೊಂದು ಅವರ ಬಲಕಾಲಿನ ಹಿಂಭಾಗಕ್ಕೆ ಕಚ್ಚಿದ್ದು ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಭಕ್ತಕೋಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಬೀದಿ ನಾಯಿ ಇದೀಗ ಏಕಾಏಕಿ ಜನರ ಮೇಲೆ ದಾಳಿ ನಡೆಸಿ ಕಚ್ಚಲು ಆರಂಭಿಸಿದ್ದು ಸ್ಥಳೀಯವಾಗಿ ಆತಂಕಕ್ಕೆ ಕಾರಣವಾಗಿದ್ದು ನಾಲ್ಕು ಮಂದಿಗೆ ಕಚ್ಚಿ ಗಾಯಗೊಳಿಸಿರುವ ಬೀದಿ ನಾಯಿ ಇದೀಗ ಸ್ಥಳದಿಂದ ಕಣ್ಮರೆಯಾಗಿರುವುದಾಗಿ ತಿಳಿದು ಬಂದಿದೆ.





