ರಸ್ತೆ ಸಂಚಾರಕ್ಕೆ ತೊಂದರೆ, ಪೊಲೀಸರೊಂದಿಗೆ ವಾಗ್ವಾದ ಆರೋಪ : ಆಟೊ ರಿಕ್ಷಾ ಚಾಲಕನಿಗೆ ದಂಡ
ಮಂಗಳೂರು: ರಸ್ತೆ ಸಂಚಾರಕ್ಕೆ ತಡೆಯೊಡ್ಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಆಟೊ ರಿಕ್ಷಾ ಚಾಲಕನಿಗೆ ದಂಡ ವಿಧಿಸಿದ ಘಟನೆ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.
ಸೆ.24ರಂದು ರಾತ್ರಿ 9:30ಕ್ಕೆ ಆಟೊ ರಿಕ್ಷಾ ಚಾಲಕ ಶೈಲೇಶ್ (28) ಎಂಬಾತ ಕುದ್ರೋಳಿ ದೇವಸ್ಥಾನದ ಮುಖ್ಯ ದ್ವಾರದ ಸಾರ್ವಜನಿಕ ರಸ್ತೆಯಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದ ಈ ಬಗ್ಗೆ ಪೊಲೀಸ್ ಸಿಬ್ಬಂದಿ ಕಾನೂನು ಉಲ್ಲಂಘನೆ ನೋಟಿಸ್ ದಾಖಲು ಮಾಡಿದ್ದರು.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶೈಲೇಶ್ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದ. ಬಳಿಕ ಆತ ಕ್ಷಮೆ ಯಾಚಿಸಿದ್ದಾನೆ. ಚಾಲಕನ ವಿರುದ್ದ ಐಎಂವಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.