ಬಹುಕೋಟಿ ರೂ. ವಂಚನೆ ಕೇಸ್
ಆರೋಪಿ ವಿರುದ್ಧ ಮತ್ತೆ ಇಬ್ಬರಿಂದ ದೂರು
ಮಂಗಳೂರು: ಹಲವರಿಗೆ ಕೋಟ್ಯಂತರ ರೂ. ವಂಚಿಸಿದ ಪ್ರಕರಣದಲ್ಲಿ ಬಂಧಿತ ಆರೋಪಿ ಬಜಾಲ್ ಬೊಳಗುಡ್ಡೆ ನಿವಾಸಿ ರೋಶನ್ ಸಲ್ದಾನ (43)ನಿಂದ ವಂಚನೆಗೆ ಒಳಗಾಗಿ ರುವುದಾಗಿ ಇನ್ನಿಬ್ಬರು ನಗರ ಸೆನ್ ಕೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರೋಶನ್ ನಿಂದ ಮಹಾರಾಷ್ಟ್ರ ಮತ್ತು ಅಸ್ಸಾಂನ ತಲಾ ಒಬ್ಬರು ವಂಚನೆಗೆ ಒಳಗಾಗಿದ್ದಾರೆ. ಈ ಪೈಕಿ ಮಹಾರಾಷ್ಟ್ರದ ಉದ್ಯಮಿಯೊಬ್ಬರು ಐದು ಕೋಟಿ ರೂ.ವನ್ನು ಜುಲೈ 16ರಂದು ಮತ್ತು ಅಸ್ಸಾಂ ರಾಜ್ಯದ ವ್ಯಕ್ತಿಯೊಬ್ಬರು 20 ಲಕ್ಷ ರೂ.ನ್ನು ಜು.17ರಂದು ಬ್ಯಾಂಕ್ ಮೂಲಕ ಆರೋಪಿಯ ಖಾತೆಗೆ ವರ್ಗಾಯಿಸಿರುವುದಾಗಿ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.

ಅವರು ನೀಡಿ ರುವ ದೂರಿನಂತೆ ಇನ್ನೊಂದು ಎಫ್ಐಆರ್ ದಾಖಲಾಗಿದೆ. ಈ ಇಬ್ಬರು ರೋಶನ್ಗೆ ಹಣ ವರ್ಗಾಯಿಸಿರುವುದನ್ನು ಪೊಲೀಸರು ಬ್ಯಾಂಕ್ಗಳನ್ನು ಸಂಪರ್ಕಿಸಿ ದೃಢಪಡಿಸಿಕೊಂಡಿದ್ದು, ಆ ಮೊತ್ತವನ್ನು ಫ್ರೀಝ್ ಮಾಡಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಗುರುವಾರ ತಡರಾತ್ರಿ ನಡೆಸಲಾದ ಮಹತ್ವದ ಕಾರ್ಯಾ ಚರಣೆಯಲ್ಲಿ ಉದ್ಯಮಿ ಮತ್ತು ಶ್ರೀಮಂತ ವ್ಯಕ್ತಿಗಳಿಗೆ 200 ಕೋಟಿ ರೂ.ಗೂ ಅಧಿಕ ವಂಚಿಸಿದ ಆರೋಪದಲ್ಲಿ ರೋಹನ್ ಸಲ್ದಾನನನ್ನು ಆತನ ಮನೆಯಿಂದ ಬಂಧಿಸಲಾಗಿತ್ತು. ಇದೀಗ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.
ಉದ್ಯಮಿಯೆಂದು ಹೇಳಿಕೊಂಡು ಹೊರರಾಜ್ಯ, ಹೊರಜಿಲ್ಲೆಯ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿ ಜಾಗದ ವ್ಯವಹಾರದ ಜೊತೆಗೆ ಸಾಲ ನೀಡುವುದಾಗಿ ಹೇಳಿ ನಂಬಿಸಿ, ಹಣ ಪಡೆದು ವಂಚಿಸುತ್ತಿದ್ದ. ಈ ರೀತಿಯಾಗಿ
ಶ್ರೀಮಂತ ಉದ್ಯಮಿಗಳಿಗೆ ಬಹುಕೋಟಿ ರೂ. ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಜಾಲ್ ಬೊಲ್ಲಗುಡ್ಡ ನಿವಾಸಿ ರೋಶನ್ ಸಲ್ದಾನನಿಗೆ ಸೇರಿದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲು ತನಿಖಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಯ ಹೆಚ್ಚಿನ ವಿಚಾರಣೆಗೆ ಸೋಮವಾರ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಆರೋಪಿ ಕೇವಲ 3 ತಿಂಗಳಲ್ಲೇ 45 ಕೋಟಿ ರೂ. ವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಕಳೆದ ಅನೇಕ ವರ್ಷಗಳಿಂದ 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ್ದಾನೆನ್ನಲಾಗಿದೆ. ಬಂಧಿತ ಆರೋಪಿ ಮನೆಯಿಂದ ಪೊಲೀಸರು 667 ಗ್ರಾಂ ಚಿನ್ನಾಭರಣ, 2.75 ಕೋಟಿ ರೂ. ಮೌಲ್ಯದ ವಜ್ರದ ಆಭರಣ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6,72, 947 ಮೌಲ್ಯದ ದೇಶಿ ಮತ್ತು ವಿದೇಶಿ ಮದ್ಯವನ್ನು, ಮಹತ್ವದ ದಾಖಲೆಗಳು ಮತ್ತು ಖಾಲಿ ಚೆಕ್ ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.