ಮಂಗಳೂರು: ಉದ್ಯಮಿಗಳಿಗೆ ಕೋಟ್ಯಾಂತರ ರೂ ವಂಚಿಸಿದ ಆರೋಪಿ ಪೊಲೀಸ್ ಬಲೆಗೆ

ಮಂಗಳೂರು: ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ. ವಂಚಿಸಿದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಮಂಗಳೂರು ಬಜಾಲ್ ಬೊಲ್ಲಗುಡ್ಡದ ರೋಶನ್ ಸಲ್ಡಾನ(43ವ) ಬಂಧಿತ ಆರೋಪಿ. ಈತ ಜು.17ರಂದು ಮನೆಯಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಆರೋಪಿಯ ಮನೆ ಪರಿಶೀಲಿಸಿದಾಗ ಆರೋಪಿ ತನ್ನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರೂ 6,72,947/- ಮೌಲ್ಯದ ದೇಶಿ ಮತ್ತು ವಿದೇಶಿ ಮದ್ಯ ದೊರೆತಿದ್ದು, ನಂತರ ಮಧ್ಯವನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಸೆನ್ ಕ್ರೈಂ ಪೊಲೀಸ್ ಠಾಣಾ ಅ.ಕ್ರ. ೩೯/೨೦೨೫ ಅಬಕಾರಿ ಕಾಯ್ದೆಯಂತೆ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ರೋಶನ್ ಸಲ್ಡಾನಾ ಮನೆಯಿಂದ ದಾಖಲಾತಿಗಳನ್ನು, ಖಾಲಿ ಚೆಕ್ಗಳನ್ನು ಹಾಗೂ ಸುಮಾರು 667 ಗ್ರಾಂ ಚಿನ್ನಾಭರಣಗಳು ಮತ್ತು ಅಂದಾಜು 2.75 ಕೋಟಿ ಮೌಲ್ಯದ ವಜ್ರದ ಉಂಗುರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ದ ಚಿತ್ರದುರ್ಗ, ಮುಂಬೈ ಸೇರಿದಂತೆ ವಿವಿಧೆಡೆ ವಂಚನೆ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಇತರರೊಂದಿಗೆ ಸೇರಿ ಅವಶ್ಯಕತೆ ಇರುವ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದು, ಕಳೆದ 3 ತಿಂಗಳಲ್ಲಿ ಆರೋಪಿಯ ವ್ಯವಹಾರ ಪರಿಶೀಲಿಸಿದಾಗ ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕಲ್ಕತ್ತಾ, ಸಾಂಗ್ಲಿ, ಲಕ್ನೋ, ಬಾಗಲಕೋಟೆ ಇತ್ಯಾದಿ ಕಡೆಗಳಲ್ಲಿ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಸುಮಾರು 32 ಕೋಟಿ ರೂಗಳನ್ನು ಆರೋಪಿ ಮತ್ತು ಇತರರು ಪಡೆದುಕೊಂಡಿರುವುದು ಕಂಡು ಬಂದಿದೆ. ಆರೋಪಿ ವಿರುದ್ದ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: ೨೨/೨೦೨೫ ಕಲಂ: ೩೧೬(೨), ೩೧೬(೫) ೩೧೮(೨), ೩೧೮(೩) ಜೊತೆಗೆ ೩(೫) ಭಾರತೀಯ ನ್ಯಾಯ ಸಂಹಿತೆ ಹಾಗೂ ಅಪರಾಧ ಕ್ರಮಾಂಕ:೩೦/೨೦೨೫ ಕಲಂ:೩೧೬(೨), ೩೧೬(೫), ೩೧೮(೨), ೩೧೮ (೩), ೬೧(೨) ಜೊತೆಗೆ ೩(೫) ಭಾರತೀಯ ನ್ಯಾಯ ಸಂಹಿತೆಯಂತೆ ವಂಚನೆ ಪ್ರಕರಣ ದಾಖಲಾಗಿದೆ.