ಶಾಸಕ ಅಶೋಕ್ ರೈ ಫೋನ್ ಕರೆಗೆ ಅಲರ್ಟ್ ಆದ ಇಲಾಖೆ!!
ಸಾರ್ವಜನಿಕರು ಫುಲ್ ಖುಷ್
ಪುತ್ತೂರು: ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಮೆಚ್ಚುಗೆಗೆ ಪಾತ್ರರಾಗುತ್ತಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮತ್ತೊಮ್ಮೆ ಸಾರ್ವಜನಿಕ ಸಮಸ್ಯೆಯೊಂದಕ್ಕೆ ಶೀಘ್ರವಾಗಿ ಸ್ಪಂದಿಸಿ ಪ್ರಶಂಸೆಗೆ ಪಾತ್ರದಾಗಿದ್ದಾರೆ.

ಒಳಮೊಗ್ರು ಗ್ರಾಪಂ ವ್ಯಾಪ್ತಿಯ ಪರ್ಪುಂಜ ಜಂಕ್ಷನ್ ಸಮೀಪದಲ್ಲಿದ್ದ ಅಪಾಯಕಾರಿ ಮರವನ್ನು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಜೂ.11ರಂದು ತೆರವು ಮಾಡಲಾಯಿತು. ಲಕ್ಷ್ಮೀ ಮತ್ತು ಗಿರಿಜಾ ಎಂಬಿಬ್ಬರ ಮನೆಯ ಪಕ್ಕದಲ್ಲಿ ಈ ಮರವಿತ್ತು. ಮರ ಸಂಪೂರ್ಣ ಒಣಗಿ ಹೋಗಿತ್ತು. ಮರವೇನಾದರೂ ಮುರಿದು ಬಿದ್ದಿದ್ದರೆ ಜೀವ ಹಾನಿ ಸಂಭವಿಸುವ ಸಾಧ್ಯತೆ ಇತ್ತು. ಈ ಬಗ್ಗೆ ವರ್ಷಗಳ ಹಿಂದೆಯೇ ಈ ಎರಡೂ ಮನೆಯವರು ಮರವನ್ನು ತೆರವು ಮಾಡಿಕೊಡಿ ಎಂದು ಸ್ಥಳೀಯ ಗ್ರಾಪಂಗೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದಲ್ಲದೆ ವರ್ಷಗಳ ಹಿಂದೆ ಒಳಮೊಗ್ರು ಗ್ರಾಮಸಭೆಯಲ್ಲೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಾಜೇಶ್ ರೈ ಪರ್ಪುಂಜರವರು ಈ ಅಪಾಯಕಾರಿ ಮರವನ್ನು ತೆರವು ಮಾಡಬೇಕು ಇಲ್ಲದಿದ್ದರೆ ಅಪಾಯವಿದೆ ಎಂದು ಕೇಳಿಕೊಂಡಿದ್ದರು. ಪಂಚಾಯತ್ನವರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ತೆರವು ಕಾರ್ಯ ಮಾಡಿರಲಿಲ್ಲ. ಮೇ.31 ರಂದು ಗ್ರಾಪಂನಲ್ಲಿ ನಡೆದ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲೂ ಮರದ ಬಗ್ಗೆ ವಿಷಯ ಪ್ರಸ್ತಾಪವಾಗಿತ್ತು.
ಅಪಾಯಕಾರಿ ಮರದ ಬಗ್ಗೆ ಒಳಮೊಗ್ರು ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿಯವರು ಶಾಸಕರ ಗಮನಕ್ಕೆ ತಂದಿದ್ದರು. ತಕ್ಷಣವೇ ಸ್ಪಂದಿಸಿದ ಶಾಸಕರು ಬಡ ಕುಟುಂಬಗಳಿಗೆ ತೊಂದರೆಯಾಗುವ ಯಾವುದೇ ಮರವಿದ್ದರೂ ಅದನ್ನು ತಕ್ಷಣವೇ ತೆರವುಗೊಳಿಸಿ ಎಂದು ಸೂಚನೆ ನೀಡಿದ್ದರು. ಸಾರ್ವಜನಿಕರಿಗೆ, ಬಡ ಕುಟುಂಬಗಳಿಗೆ ತೊಂದರೆಯಾಗಬಾರದು. ತೊಂದರೆಯಾಗುತ್ತದೆ ಅಥವಾ ಅಪಾಯ ಇದೆ ಎಂಬುದು ಸಾಬೀತಾದರೆ ತಕ್ಷಣವೇ ಮರವನ್ನು ತೆರವು ಮಾಡಿ ಎಂದು ತಿಳಿಸಿದ್ದರು. ಅದರಂತೆ ಅರಣ್ಯ ಇಲಾಖೆಯ ಪಾಣಾಜೆ ವಲಯ ಅರಣ್ಯಾಧಿಕಾರಿ ಮದನ್ ಬಿ.ಕೆಯವರ ನೇತೃತ್ವದಲ್ಲಿ ಮರವನ್ನು ತೆರವು ಮಾಡಲಾಗಿದೆ.
ಯಾವುದೇ ರಸ್ತೆ ಬ್ಲಾಕ್, ವಾಹನ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಸ್ಥಳೀಯ ಮರದ ವ್ಯಾಪಾರಿ ಸಂಶುದ್ದೀನ್ ಹಾಗೂ ತಂಡದವರು ಮರವನ್ನು ತೆರವುಗೊಳಿಸಿದರು. ಶಾಸಕರ ಸ್ಪಂದನೆಗೆ ಮತ್ತು ಅರಣ್ಯ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.