ಲಾರಿ ಮಾಲಕ ಮನಾಫ್ ವಿರುದ್ದ ಪೊಲೀಸ್ ದೂರು ನೀಡಿದ ಅರ್ಜುನ್ ಕುಟುಂಬ
ಕರ್ನಾಟಕದ ಶಿರೂರಿನಲ್ಲಿ ಭೂಕುಸಿತದ ವೇಳೆ ಲಾರಿ ಸಮೇತ ಕಣ್ಮರೆಯಾಗಿ 72 ದಿನಗಳ ಬಳಿಕ ಗಂಗಾವಳಿ ನದಿಯಲ್ಲಿ ಅರ್ಜುನ್ ಮೃತದೇಹ ದೊರಕಿದ್ದು ಬಳಿಕದ ಬೆಳವಣಿಗೆಯಲ್ಲಿ ಅರ್ಜುನ್ ಕುಟುಂಬ ಮನಾಫ್ ವಿರುದ್ಧ ಕೆಲವು ಆರೋಪಗಳನ್ನು ಹೊರಿಸಿ ಪತ್ರಿಕಾಗೋಷ್ಠಿ ನಡೆಸಿದ್ದರು. ಇದೀಗ ಮುಂದುವರಿದ ಭಾಗವಾಗಿ ಅರ್ಜುನ್ ಸಹೋದರಿ, ಲಾರಿ ಮಾಲಕ ಮನಾಫ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಅದರಂತೆ ಅರ್ಜುನ್ ಕುಟುಂಬದ ವಿರುದ್ಧ ಅಪಪ್ರಚಾರ ಮಾಡಿದವರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಮನಾಫ್ ತನ್ನ ಮೃತ ಸಹೋದರನ ಫೋಟೋ ಬಳಸಿಕೊಂಡು ಪ್ರಚಾರ ಪಡೆಯುತ್ತಿದ್ದು, ಯೂಟ್ಯೂಬ್ ಚಾನೆಲ್ ಆರಂಭಿಸಿ ಅಪಪ್ರಚಾರ ಮಾಡಿ ಕುಟುಂಬಕ್ಕೆ ಮಾನಹಾನಿ ಮಾಡಿದ್ದಾರೆ ಎಂದು ಅರ್ಜುನ್ ಸಹೋದರಿ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಮನಾಫ್ ನಮ್ಮ ಸ್ಥಿತಿಯನ್ನು ತನ್ನ ವೈಯಕ್ತಿಕ ಲಾಭಕ್ಕಾಗಿ ಬಳಸುತ್ತಿದ್ದಾರೆ. ನಮ್ಮನ್ನು ನಿರ್ಗತಿಕರು ಎಂದು ನಿರೂಪಿಸಿ ಹಣ ಸಂಗ್ರಹಿಸುತ್ತಿದ್ದಾರೆ. ಇದು ಕುಟುಂಬದ ಅನೇಕ ಸದಸ್ಯರಿಗೆ ನೋವುಂಟು ಮಾಡಿದೆ ಎಂದು ಅರ್ಜುನ್ ಸಹೋದರಿ ಆರೋಪಿಸಿದ್ದಾರೆ.
ಮನಾಫ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್-192(ಗಲಭೆಗೆ ಪ್ರಚೋದನೆ) ಮತ್ತು ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120 (O) ಅಡಿ ಚೇವಾಯೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.