ಗ್ರಾಮೀಣ ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯ ಹೆಚ್ಚಿಸಲು ವಿಜ್ಞಾನ ಬಸ್ಸು ಕೊಡುಗೆ ನೀಡಿದ ಹನೀಫ್ ಪುತ್ತೂರು ಎಲ್ಲಾ ಶ್ರೀಮಂತ ಉದ್ಯಮಿಗಳಿಗೆ ಮಾದರಿ -CRDF
ದುಬಾಯಿಯ ಮಹಮ್ಮದ್ ಬಿನ್ ರಾಶಿದ್ ಸ್ಪೇಸ್ ಸೆಂಟರಿನ ಹಿರಿಯ ಸಂಶೋಧಕ, ಅನಿವಾಸಿ ಭಾರತೀಯ ಹನೀಫ್ ಪುತ್ತೂರುರವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ್ಯ ಅಭಿವೃದ್ದಿಪಡಿಸುವ ಉದ್ದೇಶದಿಂದ ಕೊಡುಗೆ ನೀಡಿದ ವಿಜ್ಞಾನ ಬಸ್ಸು ಸರಕಾರಿ ಶಾಲೆಯ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲಿದೆ ಎಂದು ಕಮ್ಯುನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ಇದರ ಅಧ್ಯಕ್ಷರಾದ ಅಮ್ಜದ್ ಖಾನ್ ಪೋಳ್ಯ ಅಭಿಪ್ರಾಯಪಟ್ಟಿದ್ದಾರೆ.
![](https://newsbites.in/wp-content/uploads/2023/11/IMG_20231121_194448-1-1024x360.jpg)
ಸುಮಾರು 50 ಲಕ್ಷ ರೂ. ವೆಚ್ಚದ ಹೈಟೆಕ್ ಸೌಲಭ್ಯ ಮತ್ತು ತರಬೇತುದಾರರು ಇರುವ ಈ ಕಂಪ್ಯೂಟರ್ ಲ್ಯಾಬ್ ಇರುವ ಬಸ್ಸು ಪುತ್ತೂರಿನಂತ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದರು. ಗ್ರಾಮಾಂತರ ಪ್ರದೇಶವೇ ಹೆಚ್ಚು ಇರುವ, ಆರ್ಥಿಕವಾಗಿ ಹಿಂದುಳಿದ ಸಂಸಾರದ ಮಕ್ಕಳು ಕಲಿಯುವ, ಅದರಲ್ಲೂ ಮುಖ್ಯವಾಗಿ ಪ್ರತಿಭೆ ಮತ್ತು ಕೌಶಲ್ಯ ಇರುವ ಸರಕಾರಿ ಶಾಲೆಯ ಮಕ್ಕಳಿಗೆ ಈ ಅವಕಾಶವು ಕೊಡುಗೆ ಎಂದು ಹೇಳುವುದಕ್ಕಿಂತ ವರದಾನ ಎಂದು ಹೇಳಲು ಬಯಸುತ್ತೇನೆ ಎಂದ ಅಮ್ಜದ್ ಖಾನ್, ಇಂತಹ ಒಂದು ಕಲ್ಪನೆ ಅಥವಾ ಯೋಜನೆ ಹನೀಫ್ ಪುತ್ತೂರವರ ದೂರದೃಷ್ಠಿ ಮತ್ತು ರಚನಾತ್ಮಕ ಆಲೋಚನೆಯ ಫಲ ಎಂದು ಹೇಳಲು ಇಚ್ಚಿಸುತ್ತೇನೆ ಎಂದರು.
ದುಬಾಯಿಯಲ್ಲಿ ಉದ್ಯೋಗದಲ್ಲಿ ಇದ್ದು ನನ್ನೂರ ಮಕ್ಕಳ ಬಗ್ಗೆ ಕಾಳಜಿ, ಕನಸು ಇಟ್ಟು ಅವರ ಭವಿಷ್ಯದ ಹಿತ ಚಿಂತನೆ ಮಾಡಿದ ಹನೀಫ್ ಪುತ್ತೂರುರವರು ಎಲ್ಲಾ ಶ್ರೀಮಂತರಿಗೂ ಮಾದರಿ. ಇಂತಹ ಯೋಜನೆಯನ್ನು ತಳಮಟ್ಟದಲ್ಲಿ ವ್ಯವಸ್ಥಿತವಾಗಿ ರೂಪಿಸಲು ಎಂ-ಪ್ರೆಂಡ್ಸ್ ನಂತಹ ವೃತ್ತಿಪರ ತಂಡ ಇರುವುದರಿಂದ ಇದು ಯಶಸ್ಸು ಆಗಲಿದೆ. ಅದರಲ್ಲೂ ಹನೀಫ್ ಹಾಜಿ ಗೋಳ್ತಮಜಲು, ರಶೀದ್ ವಿಟ್ಲ ಮುಂತಾದ ಸಮಾಜಿಕ ಬದ್ದತೆ ಇರುವ ಕ್ರಿಯಾಶೀಲ ತಂಡದಿಂದ ಹನೀಫ್ ಪುತ್ತೂರುರವರ ಕನಸು ನನಸಾಗಲಿ ಎಂದು ಬಾವಿಸುತ್ತೇನೆ ಎಂದು ಅಮ್ಜದ್ ಖಾನ್ ಪೋಳ್ಯ ಅಭಿಪ್ರಾಯಪಟ್ಟಿದ್ದಾರೆ.