ಅಕ್ರಮ ಕೆಂಪುಕಲ್ಲು ಸಾಗಾಟ: ಎರಡು ಲಾರಿಗಳು ವಶ
ವಿಟ್ಲ: ಪರವಾನಿಗೆ ಹಾಗೂ ಸೂಕ್ತ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಕೆಂಪುಕಲ್ಲು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೆ.14ರ ರಾತ್ರಿ ಕೇರಳ ಕಡೆಯಿಂದ ಕನ್ಯಾನ ಕಡೆಗೆ ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ಕರೋಪಾಡಿ ಗ್ರಾಮದ ನೆಲ್ಲಿಕಟ್ಟೆ ಜಂಕ್ಷನ್ ಬಳಿ ಪೊಲೀಸರು ತಡೆದು ಪರಿಶೀಲಿಸಿದಾಗ ಯಾವುದೇ ಪರವಾನಿಗೆ ಅಥವಾ ದಾಖಲಾತಿಗಳಿಲ್ಲದೆ ಕಲ್ಲು ಸಾಗಿಸುತ್ತಿರುವುದು ಪತ್ತೆಯಾಗಿದೆ. ಲಾರಿ ಚಾಲಕ ವೀರಕಂಭ ನಿವಾಸಿ ಮಹಮ್ಮದ್ ತೌಕಿರ್ (26), ಲಾರಿ ಮಾಲೀಕ ಮೊಹಮ್ಮದ್ ಸಿಮ್ರಾನ್ ಹಾಗೂ ಸಹಕರಿಸಿದ ಸಜೀರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಇದೇ ದಿನ ತಡರಾತ್ರಿ ಕುದ್ದುಪದವು ಮಾರ್ಗವಾಗಿ ಕಲ್ಲಡ್ಕ–ಕಾಂಞಗಾಡ್ ಅಂತರರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಕೆಂಪುಕಲ್ಲು ಸಾಗಿಸುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಲಾರಿಯನ್ನು ವಶಪಡಿಸಿಕೊಂಡು ಬೆಳ್ತಂಗಡಿ ಕನ್ಯಾಡಿ ನಿವಾಸಿ ಚಂದ್ರೇಶ್ (40) ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಎರಡೂ ಪ್ರಕರಣಗಳಲ್ಲಿ MMDR Act ಹಾಗೂ ಸಂಬಂಧಿತ ಕಾನೂನುಗಳ ಅಡಿಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


