ವೇಣೂರು: ಕೃಷಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜಾತಿನಿಂದನೆ, ಜೀವ ಬೆದರಿಕೆ, ಆರೋಪಿ ಬಂಧನ

ಬೆಳ್ತಂಗಡಿ: ಕೃಷಿ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಮಹಿಳೆಗೆ ಜಾತಿನಿಂದನೆ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಹನೀಫ್ ಎಂಬಾತನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.
ಸೆ.7ರಂದು ಮಹಿಳೆ ಇತರರೊಂದಿಗೆ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ, ಬೆಳ್ತಂಗಡಿ ಹೊಸಂಗಡಿ ನಿವಾಸಿ ಹನೀಫ್ ಜಮೀನಿಗೆ ಅತಿಕ್ರಮ ಪ್ರವೇಶಿಸಿ ಜಾತಿನಿಂದನೆ ಮಾಡಿ, ಅನುಚಿತವಾಗಿ ವರ್ತಿಸಿ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅಲ್ಲದೆ, ಜಮೀನಿನ ಕೃಷಿ ಬೆಳೆ ಹಾಗೂ ಬೇಲಿಗೆ ಹಾನಿ ಮಾಡಿ ಸುಮಾರು ₹1.30 ಲಕ್ಷ ನಷ್ಟ ಉಂಟುಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಸೆ.8ರಂದು ಮಹಿಳೆ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 63/2026ರಂತೆ ಬಿ.ಎನ್.ಎಸ್. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿಯಾಗಿರುವ ಹನೀಫ್ನನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


