ಕರಾವಳಿಕ್ರೈಂ

ಬೆಳ್ತಂಗಡಿ: ವೇಣೂರಿನಲ್ಲಿ ಎಂಡಿಎಂಎ ಸಾಗಾಟ- ಇಬ್ಬರ ಬಂಧನ


ಬೆಳ್ತಂಗಡಿ: ನಿಷೇಧಿತ MDMA ಮಾದಕವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. ಗುರುವಾಯನಕೆರೆಯಿಂದ ಮೂಡಬಿದಿರೆ ಕಡೆಗೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.


ಬಂಧಿತ ಆರೋಪಿಗಳನ್ನು ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದ ಹಂಡೇಲು ನಿವಾಸಿ ತನ್ವೀರ್(27) ಹಾಗೂ ಮೂಡಬಿದಿರೆಯ ಕಲ್ಲಬೆಟ್ಟು ನಿವಾಸಿ ಮುಹಮ್ಮದ್ ಸಲ್ವಾನ್(22) ಎಂದು ಗುರುತಿಸಲಾಗಿದೆ.
ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮೇ 27ರಂದು ಕಂಬಳದಡ್ಡ ಬಳಿ ಗುರುವಾಯನಕೆರೆ–ಮೂಡಬಿದಿರೆ ರಸ್ತೆಯಲ್ಲಿ ನಾಖಾಬಂದಿ ಹಾಕಿ ವಾಹನ ತಪಾಸಣೆ ನಡೆಸಲಾಯಿತು.

 

ಈ ವೇಳೆ ಕಾರನ್ನು ತಡೆದು ಪರಿಶೀಲಿಸಿದಾಗ, ಮಾರಾಟಕ್ಕೆ ಸಾಗಿಸಲಾಗುತ್ತಿದ್ದ 4 ಗ್ರಾಂ MDMA ಮಾದಕವಸ್ತು ಪತ್ತೆಯಾಯಿತು. ಇದರ ಅಂದಾಜು ಮೌಲ್ಯ ಸುಮಾರು 40 ಸಾವಿರ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸುನ್ನತ್ ಕೆರೆ ನಿವಾಸಿ ಹಂಝತ್ ಕರಾರ್ ಎಂಬಾತ ಮಾರಾಟಕ್ಕಾಗಿ ಮಾದಕವಸ್ತು ನೀಡಿದ್ದಾನೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಬಂಧಿತ ಆರೋಪಿಗಳನ್ನು ಮೇ 28ರಂದು ಮಂಗಳೂರು ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಪ್ರಕರಣದ ಮೂರನೇ ಆರೋಪಿ ಹಂಝತ್ ಕರಾರ್ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!